ಪ್ರಜಾವಾಣಿ ಪತ್ರಕರ್ತರಿಗೆ ಪುಸ್ತಕಸುಗ್ಗಿಯ ಕಾಲ. ಸದಾ ಕ್ರಿಯಾಶೀಲರಾಗಿರುವ ಲಕ್ಷ್ಮಣ್ ಕೊಡಸೆ ಇತ್ತೀಚಿಗೆ ತಮ್ಮ ಕೃತಿಗಳನ್ನು ಹೊರತಂದರು. ಅದರ ಬೆನ್ನಲ್ಲೇ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮವೂ ಬಿಡುಗಡೆಯಾಯಿತು. ಇದೀಗ ವ್ಯಂಗ್ಯಚಿತ್ರಕಾರ ಮಹಮದ್ ಸರದಿ. ಅವರ ವ್ಯಂಗ್ಯ (ವಿ)ಚಿತ್ರ ಸಂಕಲನ ಫೆ.೧೦ರಂದು ಬಿಡುಗಡೆಯಾಗುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕೃತಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.

ಮಹಮ್ಮದ್ ಪ್ರಜಾವಾಣಿಯ ಬಹುದೊಡ್ಡ ಆಸ್ತಿ. ಸಾವಿರ ಮಾತುಗಳಲ್ಲಿ ಹೇಳುವುದನ್ನು ಕೆಲವೇ ಗೆರೆಗಳಲ್ಲಿ ಹೇಳುವ ಕಲೆ ಮಹಮ್ಮದ್‌ಗೆ ಸಿದ್ಧಿಸಿದೆ. ಅವರು ಬರೆದ ಹಲವು ಚಿತ್ರಗಳನ್ನು ಮರೆಯುವುದು ಸಾಧ್ಯವೇ ಇಲ್ಲ.

ರಾಜಕೀಯ ಜಟಾಪಟಿ, ವಿವಾದಗಳಿದ್ದ ಸಂದರ್ಭದಲ್ಲಿ ಇವತ್ತು ಮಹಮ್ಮದ್ ಕಾರ್ಟೂನ್ ನೋಡಿದ್ರಾ ಎಂಬ ಮಾತಿನೊಂದಿಗೇ ಪತ್ರಕರ್ತರ ಸಂಭಾಷಣೆ ಶುರುವಾಗುತ್ತಿತ್ತು.

ಮಹಮ್ಮದ್ ಇದೇ ಕ್ರಿಯಾಶೀಲತೆ, ಮೊನಚು, ಬೆರಗು ಕಾದಿಟ್ಟುಕೊಳ್ಳಲಿ ಎಂದು ಹಾರೈಸೋಣ.

ಮಹಮ್ಮದ್‌ರ ಪುಸ್ತಕಕ್ಕೆ ಹೆಸರಾಂತ ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಬೆನ್ನುಡಿ ಬರೆದಿದ್ದಾರೆ. ಅವರು ಎಲ್ಲರ ಮನಸಿನಲ್ಲಿ ಇದ್ದುದನ್ನೇ ಹೇಳಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ. ಇದನ್ನು ನಾವು ನೋಡಿದ್ದು ಚಿಂತನ ಪುಸ್ತಕ ಎಂಬ ಬ್ಲಾಗ್‌ನಲ್ಲಿ. ಹೊಸ ಪುಸ್ತಕಗಳ ಕುರಿತು ಈ ಬ್ಲಾಗ್‌ನಲ್ಲಿ ಸಾಕಷ್ಟು ಮಾಹಿತಿಗಳಿವೆ.

ಓವರ್ ಟು ನಟರಾಜ್ ಹುಳಿಯಾರ್...

ಮಹಮ್ಮದ್ ಪ್ರಾಯಶಃ ಇವತ್ತು ಕರ್ನಾಟಕದ ಶ್ರೇಷ್ಠ ವ್ಯಂಗ್ಯಚಿತ್ರಕಾರ ಎನ್ನುವುದರಲ್ಲಿ ಯಾರಿಗೂ ಹೆಚ್ಚಿನ ಅನುಮಾನವಿರಲಾರದು. ವಿರೋಧ ಪಕ್ಷಗಳು ತಮಗೆ ಅನುಕೂಲವಾದಾಗ ಮಾತ್ರ ವಿರೋಧಪಕ್ಷಗಳಾಗುವ ಈ ಕೆಟ್ಟಕಾಲದಲ್ಲಿ ಮಹಮ್ಮದ್, ಕರ್ನಾಟಕದ ಸಮರ್ಥ ವಿರೋಧಪಕ್ಷವಾಗಿದ್ದಾರೆ.


ಭಾರತದ ಮುಖ್ಯ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಮಾರಿಯೋ ಮಿರಾಂಡ, ಆರ್.ಮೂರ್ತಿ, ಥರದ ವ್ಯಾಪಕ ಬೌದ್ಧಿಕ ಸಿದ್ಧತೆಯುಳ್ಳ ವ್ಯಂಗ್ಯಚಿತ್ರಕಾರರಾಗಿ ಮಹಮ್ಮದ್ ವಿಕಾಸಗೊಳ್ಳುತ್ತಿದ್ದಾರೆ. ಅಷ್ಟೇ ಮುಖ್ಯವಾಗಿ ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ವ್ಯಾಖ್ಯಾನಕಾರರಾಗಿ ಹಾಗು ಏಕಕಾಲಕ್ಕೆ ಮೂಲಭೂತವಾದಿಗಳನ್ನೂ, ಪ್ರಗತಿಪರರನ್ನೂ ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವ ಸ್ವತಂತ್ರ ಬುದ್ಧಿಜೀವಿಯಾಗಿಯೂ ಮಹಮ್ಮದ್ ರೂಪುಗೊಂಡಿದ್ದಾರೆ.


 ನಾನು ಹದಿಹರಯದಿಂದಲೂ ಗಮನಿಸಿರುವ ಕನ್ನಡ ವ್ಯಂಗ್ಯಚಿತ್ರಕಾರರು ವಿಚಿತ್ರ ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಮಹಮ್ಮದ್ ಮಾತ್ರ ಈ ಬಗೆಯ ಅನೇಕ ಅಪಾಯಗಳಿಂದ ಪಾರಾಗಲೆತ್ನಿಸಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಸಾಧ್ಯವಾದಷ್ಟೂ ವಸ್ತುನಿಷ್ಠವಾಗಿ ಭಾರತದ ಘಟನಾವಳಿಗೆ ಪ್ರತಿಕ್ರಿಯಿಸಿರುವ ಆರ್.ಕೆ.ಲಕ್ಷ್ಮಣ್‌ರಂತೆ ಮಹಮದ್ ಕೂಡ ಕರ್ನಾಟಕದ ಹಾಗೂ ಒಟ್ಟಾರೆ ಜಗತ್ತಿನ ವಿದ್ಯಮಾನಗಳನ್ನು ವ್ಯಾಖ್ಯಾನಿಸಿದ್ದಾರೆ.
0 komentar

Blog Archive