ಚಿತ್ರದುರ್ಗದಲ್ಲಿ ನಡೆದ ಮಾಧ್ಯಮ ಕರ್ನಾಟಕ ವಿಚಾರಗೋಷ್ಠಿಯ ಕುರಿತಂತೆ ಅದರಲ್ಲಿ ಭಾಗವಹಿಸಿದ್ದ ಪತ್ರಕರ್ತರೊಬ್ಬರು ಪುಟ್ಟ ವರದಿಯನ್ನು ಕಳುಹಿಸಿದ್ದಾರೆ. ಮಾಧ್ಯಮ ಸೆಮಿನಾರುಗಳಲ್ಲಿ ಕೇಳಿಬರುವ ಒಣ ಅಕಾಡೆಮಿಕ್ ಚರ್ಚೆಗಿಂತ ಹೊರತಾಗಿ ಈ ಗೋಷ್ಠಿ ನಡೆದಿರುವ ಬಗ್ಗೆ ವರದಿಯಲ್ಲಿ ಮಾಹಿತಿಯಿದೆ. ಇದು ಸಂತೋಷದ ವಿಷಯ. -ಸಂ

ಪತ್ರಿಕೆ ಉದ್ಯಮವಾಗಿ ಬಿಟ್ಟಿದೆ. ಮಾಲೀಕರ ಅಣತಿಯಂತೆ ಇಲ್ಲಿ ಎಲ್ಲವೂ ನಡೆಯುತ್ತೆ. ನಾವು ಇಲ್ಲಿ ಏನೋ ಮಾಡುವಂತಿಲ್ಲ. ಅಸಹಾಯಕ ಪರಿಸ್ಥಿತಿ ನಮ್ಮದು. ದೃಶ್ಯ ಮಾಧ್ಯಮದ್ದು ಇದೇ ಕಥೆ. ಟಿ.ಆರ್.ಪಿ. ರೇಟು ಆಧರಿಸಿಯೇ ಕಾರ್ಯಕ್ರಮ ರೂಪಿಸಬೇಕು. ನಾವು ಏನೋ ಮಾಡುವಂತಿಲ್ಲ.

ಚಿತ್ರದುರ್ಗದಲ್ಲಿ ಜೂನ್ ೨೫-೨೬ರಂದು ನಡೆದ ಮಾಧ್ಯಮ ಕರ್ನಾಟಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಹಲವು ಪತ್ರಕರ್ತರ ಅಸಹಾಯಕ ಗೊಣಗಾಟವಿದು.

ಅಷ್ಟೊಂದು ಪರಿಸ್ಥಿತಿ ಕೆಟ್ಟು ಹೋಗಿದ್ದರೆ ಅಲ್ಲಿಂದ ಹೊರಗೆ ಬನ್ನಿ, ಹೊಟ್ಟೆಪಾಡಿಗೆ ಏನಾದರೂ ಕೆಲಸ ಮಾಡಿ, ಕನಿಷ್ಠ ಮಾನವಂತರಾಗಿ ನಿಮಗೆ ತಿಳಿದಂತೆ ಕೆಲಸ ಮಾಡಲಾದರೂ ಸಾಧ್ಯವಾಗುತ್ತೆ ಎನ್ನುವ ಹತಾಶ ಪ್ರಶ್ನೆಯೂ ಸಭಿಕರಿಂದ ತೂರಿಬಂತು.

ಭಾಗವಹಿಸಿದ್ದ ಬಹುತೇಕರು ಪತ್ರಕರ್ತರೇ ಆಗಿದ್ದರಿಂದಲೂ ಏನೋ, ಇಡೀ ಗೋಷ್ಠಿಗೇ ಒಂದು ಬಗೆಯ ಆತ್ಮಾವಲೋಕನದ ಸ್ವರೂಪ ಬಂದಿತ್ತು. ಒಂದಷ್ಟು ಜನರದ್ದು ಏನೂ ಮಾಡಲಾಗದ ಅಸಹಾಯಕತೆಯಿಂದ ಹೊರಬರುವ ಹಳಹಳಿಕೆ. ಮತ್ತೆ ಕೆಲವರದು ಇದನ್ನು ಮೀರಿ ನಿಲ್ಲುವ ಉತ್ಸಾಹ. ಒಟ್ಟು ಗೋಷ್ಠಿ ಆಶಾವಾದವನ್ನೇ ಧ್ವನಿಸಿದ್ದು ಸಮಾಧಾನದ ಸಂಗತಿ.

ವಿಚಾರ ಸಂಕಿರಣದ ಆಶಯ ನುಡಿ ನುಡಿದು ಎರಡು ದಿನಗಳ ಕಾಲ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಎಲ್ಲವನ್ನೂ ಕೇಳಿ, ಆಗಾಗ ಪ್ರತಿಕ್ರಿಯಿಸುತ್ತಿದ್ದ ಪ್ರಜಾವಾಣಿ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು ಪತ್ರಿಕೆ ಉದ್ಯಮವಾಗಿದ್ದರೂ ಅಲ್ಲಿ ಮಾಲೀಕರಿಗೂ ಕೆಲವು ಸಮಸ್ಯೆಗಳಿವೆ. ಪತ್ರಕರ್ತರಿಗೆ ತೀರಾ ಅಸಹಾಯಕರೇನಲ್ಲ. ಅದೊಂದು ನೆಪ ಅಷ್ಟೇ. ಸಾಮಾಜಿಕ ಸಮಸ್ಯೆಗಳ ಬಗ್ಗೆ, ಜನಪರವಾಗಿ ಬರೆಯಬೇಕೆಂದರೆ ಯಾರು ಬೇಡ ಎಂದು ಹೇಳುತ್ತಾರೆ. ಬರೆಯುವ ಮನಸ್ಸು ಇರಬೇಕಷ್ಟೇ. ಸ್ವಲ್ಪ ರಿಸ್ಕ್ ತಗೋಬೇಕು. ಅವಕಾಶ ಸೃಷ್ಟಿಸಿಕೊಳ್ಳಬೇಕು. ಪತ್ರಕರ್ತ ನಿಷ್ಪಕ್ಷಪಕ್ಷಪಾತಿಯಾಗಿರಬೇಕು ಎಂಬುದೇ ಸುಳ್ಳು, ಪತ್ರಕರ್ತ ಜನರ ಪಕ್ಷಪಾತಿಯಾಗಿರಬೇಕು ಎಂದರು.

ಹಣ ಮಾಡಬೇಕಿಂದಿದ್ದರೆ ಬೇರೆ ವೃತ್ತಿಗಳಿವೆ, ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ದುಡ್ಡು ಮಾಡಲು ಈ ವೃತ್ತಿಗೆ ಬರಬೇಡಿ. ಇಂದಿರಾಗಾಂಧಿ ಪತ್ರಕರ್ತರ ಹಕ್ಕುಗಳನ್ನು ನಿರ್ಬಂಧಿಸಿದ್ದರಿಂದಾಗಿ ದೇಶದ ಪತ್ರಕರ್ತರೆಲ್ಲರೂ ಒಂದಾದರು, ಹೋರಾಟ ನಡೆಸಿದರು. ಈಗ ಇಂದಿರಾಗಾಂಧಿಯಂಥವರು ಇಲ್ಲ. ಎಲ್ಲ ರಾಜಕಾರಣಿಗಳು ಪತ್ರಕರ್ತರ ಮಿತ್ರರಾಗುತ್ತಿದ್ದಾರೆ. ಪತ್ರಕರ್ತರಿಗೆ ಇಂದಿರಾ ಅವರಂಥ ಶತ್ರುಗಳಿಗಿಂತ ಈಗಿನ ರಾಜಕಾರಣಿಗಳಂಥ ಮಿತ್ರರು ಅಪಾಯಕಾರಿ.

ಇವತ್ತಿನ ಲಾಭಕೋರ, ಕೊಳ್ಳುಬಾಕ ಸಮಾಜದಲ್ಲಿ ಪತ್ರಕರ್ತರು ತಮ್ಮ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ನಿಮ್ಮನ್ನು ಅಪ್ರಮಾಣಿಕಗೊಳಿಸುವ ಒತ್ತಡ ಮನೆಯಲ್ಲೇ, ಕಚೇರಿಯಲ್ಲೇ ಆರಂಭವಾಗಬಹುದು. ಜನಪರ ಧ್ಯೇಯವುಳ್ಳ ಪತ್ರಕರ್ತ ಇದನ್ನು ಮೀರಬೇಕು... ಹೀಗೆ ಹೇಳುತ್ತ ಹೋದರು ದಿನೇಶ್ ಅಮೀನ್ ಮಟ್ಟು.

ವಿಚಾರ ಸಂಕಿರಣದ ಉದ್ಘಾಟನೆ ನಡೆಸಿದ ಹಿರಿಯ ಪತ್ರಕರ್ತ ಸತ್ಯ ಕಳೆದ ದಿನಗಳನ್ನು ನೆನಪು ಮಾಡಿಕೊಂಡು ವರ್ತಮಾನದ  ಪತ್ರಕರ್ತರಲ್ಲಿ ವೃತ್ತಿನಿಷ್ಠೆ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಸಮಯ ಸುದ್ದಿ ವಾಹಿನಿ ಮುಖ್ಯಸ್ಥ ಶಶಿಧರ್ ಭಟ್ ಹಿಂದೆ ನಾವೆಲ್ಲ ಈ ವೃತ್ತಿಗೆ ಬಂದಾಗ ರೈತ, ದಲಿತ, ಕನ್ನಡ ಚಳವಳಿಗಳು ಉತ್ತುಂಗದಲ್ಲಿದ್ದವು. ನಾವೆಲ್ಲರೂ ಅವುಗಳ ಪ್ರಭಾವದಿಂದ ಹೊರತಾಗಿರಲಿಲ್ಲ. ಹೀಗಾಗಿ ಪತ್ರಿಕಾ ವೃತ್ತಿ ಆಯ್ದುಕೊಂಡವರಲ್ಲಿ ಆದರ್ಶವಿತ್ತು, ಆದರೆ ಅದು ಈಗ ಇಲ್ಲ ಎಂದರು. ಟಿಆರ್‌ಪಿ ತಂದುಕೊಡದ ಕಾರ್ಯಕ್ರಮಗಳನ್ನು ನೀಡಿದರೆ ಪತ್ರಕರ್ತ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದು ತಮ್ಮ ಅನುಭವಗಾಥೆಯನ್ನು ಮಂಡಿಸಿದರು.

ಗೋಷ್ಠಿಯಲ್ಲಿ ಸಂಪಾದಕೀಯ ಬ್ಲಾಗ್‌ನ ಪ್ರಸ್ತಾಪವೂ ಆಯಿತು. ಕೆಜಿಎಫ್‌ನ ಮಲಹೊರುವವರ ಬಗ್ಗೆ ಪ್ರತಿಕ್ರಿಯಿಸಿದ ರವಿಕೃಷ್ಣಾರೆಡ್ಡಿ ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು.

ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಎನ್.ಎ.ಎಂ.ಇಸ್ಮಾಯಿಲ್, ಸಿ.ಜಿ.ಮಂಜುಳ, ಕೆ.ಫಣಿರಾಜ್, ಪರುಶುರಾಮ ಕಲಾಲ್, ಲಕ್ಷ್ಮಣ ಹೂಗಾರ್, ರೂಪಾ ಹಾಸನ, ಲೋಕೇಶ್ ಅಗಸನಕಟ್ಟೆ, ದಿನೇಶ್ ಕುಮಾರ್ ಎಸ್.ಸಿ., ಬಿ.ಎನ್.ಮಲ್ಲೇಶ್, ಜಿ.ಜಡಿಯಪ್ಪ ಮತ್ತಿತರರು ಮಾತನಾಡಿದರು. ಸಂವಾದ, ಚರ್ಚೆ ಎರಡು ದಿನಗಳ ಕಾಲ ವೇದಿಕೆಯಲ್ಲಿ ಹಾಗೂ ಹೊರಗಡೆ ನಡೆದೇ ಇತ್ತು.

ಕಾರ್ಯನಿರತ (ಮರೆತ) ಪತ್ರಕರ್ತರ ಸಂಘ ಅಥವಾ ಪ್ರೆಸ್ ಕ್ಲಬ್ ಮಾಡಬೇಕಿದ್ದ ಇಂತಹ ವಿಚಾರ ಸಂಕಿರಣವನ್ನು ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ, ಚಿತ್ರದುರ್ಗದ ಗೆಳೆಯರ ಬಳಗ ಏರ್ಪಡಿಸಿ, ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಿದ್ದು ಕೂಡಾ ಇಲ್ಲಿ ವಿಶೇಷವಾಗಿತ್ತು.

ಈ ವಿಚಾರ ಸಂಕಿರಣದೊಳಗೆ ಪತ್ರಕರ್ತ ಎಸ್.ಕುಮಾರ್ ರಚಿಸಿದ ಚಳಿಗಾಲದ ಎಲೆಸಾಲು ಕವನ ಸಂಕಲನ ಬಿಡುಗಡೆಯಾಗುವಾಗ ಮಳೆಯೂ ಮಳೆ. ಈ ಮಳೆಯ ನಡುವೆ ವಿಮರ್ಶಕ ಡಾ. ಟಿ. ರಾಮಲಿಂಗಪ್ಪ ಬೇಗೂರು ಪ್ರೇಮ ಕವಿತೆಗಳ ಕುರಿತು ಗುಡುಗು, ಸಿಡಿಲು ಸಿಡಿಸಿದ್ದು ಸಹ ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಸವಿತಾ ನಾಗಭೂಷಣ ಅವರು ಗುಡಾಣವಾಗಿರುವ ಮನೆಯ ಸರಕುಗಳ ಪಟ್ಟಿ ನೀಡಿ, ಅವು ಕವಿತೆಯ ವಸ್ತುಗಳಾಗಬಹುದು ಎಂದಿದ್ದು ಮಾತ್ರ ಹೊರಗಡೆ ಹಾಗೇ ಸುಮ್ಮನೆ ಎನ್ನುವ ವಿಚಿತ್ರ ಚರ್ಚೆ, ಸಂವಾದಕ್ಕೆ ಕಾರಣವಾಯಿತು.

ಸಮಾರೋಪ ಭಾಷಣ ಮಾಡಿದ ಕುವೆಂಪು ವಿವಿ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮೀಡಿಯಾ ಸ್ಟುಡಿಯೋಗಳು ಹುಸಿ ಪಾರ್ಲಿಮೆಂಟುಗಳಾಗುತ್ತಿರುವ, ಅಂಥ ಭ್ರಮೆ ಹುಟ್ಟಿಸುವ ಅಪಾಯಗಳ ಬಗ್ಗೆ ಮಾತನಾಡಿದರು. ಮಾಧ್ಯಮಗಳ ಬಗ್ಗೆ ನೋಮ್ ಚೊಮಸ್ಕಿ ನಡೆಸಿದ ಸಂಶೋಧನೆಯತ್ತ ಗಮನ ಹರಿಸುತ್ತಲೇ ಪತ್ರಕರ್ತರ ಹಾದಿ ಹೇಗಿರಬೇಕು ಎಂಬುದನ್ನು ನಿರೂಪಿಸಲು ಪ್ರಯತ್ನಿಸಿದರು.

ಇಡೀ ಗೋಷ್ಠಿಯನ್ನು ಸಾಕ್ಷೀಕರಿಸುವುದರ ಜತೆಗೆ ಎಲ್ಲರೊಂದಿಗೆ ಬೆರೆತು ಗೋಷ್ಠಿಯ ಸಾಕ್ಷಿಪ್ರಜ್ಞೆಯಾಗಿದ್ದವರು ದಿನೇಶ್ ಅಮೀನ್ ಮಟ್ಟು. ಪ್ರಜಾವಾಣಿಯ ಕಲ್ಲಿನ ಕಟ್ಟಡದಿಂದ ಹೊರಬಂದು ಸಮಾಜದ ಜತೆ ಮುಖಾಮುಖಿಯಾಗಲು ದಿನೇಶ್ ಹಿಂಜರಿಯುತ್ತಾರೆ ಎಂಬ ಸಣ್ಣ ಆರೋಪ ಅಲ್ಲಲ್ಲಿ ಕೇಳಿಬಂದಿತ್ತು. ಈ ಆರೋಪವನ್ನು ಅವರು ಹುಸಿಗೊಳಿಸಿದರು.

ಮಾಧ್ಯಮ ಲೋಕ ಆಗಾಗ ಇಂಥ ಅವಲೋಕನ ನಡೆಸಬೇಕು ಎಂಬುದು ಇತ್ತೀಚಿಗೆ ಹೆಚ್ಚುತ್ತಿರುವ ಪ್ರಾಜ್ಞರ ಒತ್ತಾಯ. ಇಂಥ ಬೇಡಿಕೆಗೆ ದುರ್ಗದ ಹುಡುಗರು ಪ್ರತಿಸ್ಪಂದಿಸಿರುವುದು ಸಂತೋಷದ ವಿಷಯ.
0 komentar

Blog Archive