ನಾವು ಪಶ್ಚಿಮಘಟ್ಟದ ಸಣ್ಣ, ಅಭಿವೃದ್ಧಿ ಹೊಂದುತ್ತಿರುವ, ಸುಶಿಕ್ಷಿತ ಜನರಿರುವ ಸಾಗರ ಎಂಬ ಊರಿನವರು. ದೇಶದ ಮಾಧ್ಯಮಗಳ ಸಂಪಾದಕರ ವೃತ್ತಿಪರ ಸಂಘಟನೆಯಾಗಿರುವ ತಮ್ಮ ಸಂಸ್ಥೆಯಿಂದ ಅತೀವ ನಿರೀಕ್ಷೆಗಳನ್ನು ಇಟ್ಟುಕೊಂಡು ಈ ಪತ್ರವನ್ನು ಬರೆಯುತ್ತಿದ್ದೇವೆ...

ಹೀಗೆ ಆರಂಭವಾಗುತ್ತದೆ ದೂರು. ಎಡಿಟರ‍್ಸ್ ಗಿಲ್ಡ್‌ನ ಅಧ್ಯಕ್ಷರು-ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾದ ಈ ದೂರನ್ನು ಬರೆದವರು ಸಾಗರದಲ್ಲಿ ಪಾನಿಪುರಿ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುವ ಬಡ ಬ್ರಾಹ್ಮಣ ಕುಟುಂಬದ ಸದಸ್ಯರು, ಅವರ ನೆರವಿಗೆ ನಿಂತ ಕೆಲವು ಮಾನವೀಯ ಸಂಘಟನೆಗಳು ಮತ್ತು ವ್ಯಕ್ತಿಗಳು.

If you don’t wake up and ring the alarm bell now, nobody can save the media from self destruction. Journalists have to earn their respect by discharging duties in a fearless and impartial manner.

Please don’t let these helpless villagers and small town people down. If you can’t save us, nobody else can save us. If the media wants to die a tragic death like this in India, there is nothing we ordinary, innocent people can do to save it..... ಪತ್ರ ಹೀಗೆ ಸಾಗುತ್ತದೆ.

ದೂರಿನ ಸಾರಾಂಶವಿಷ್ಟೆ. ಹೊಸನಗರದ ರಾಮಚಂದ್ರಾಪುರ ಮಠದ ಗುರುಕುಲದಲ್ಲಿ ಓದುತ್ತಿದ್ದ ಆರನೇ ತರಗತಿಯ ಹುಡುಗಿಯ ಮೇಲೆ ಗುರುಕುಲದ ಮುಖ್ಯಸ್ಥ ಜಗದೀಶ್ ಶರ್ಮ ಎಂಬಾತ ಅತ್ಯಾಚಾರ ಎಸಗಲು ಯತ್ನಿಸುತ್ತಾನೆ. ಈ ಯತ್ನಕ್ಕೂ ಮುನ್ನ ಅವನು ಆ ಅಮಾಯಕ ಹುಡುಗಿಯನ್ನು ತನ್ನ ಲೈಂಗಿಕ ಚೇಷ್ಟೆಗಳಿಗೆ ಬಳಸಿಕೊಂಡಿರುತ್ತಾನೆ. ಇದು ಆಕೆಯ ಪೋಷಕರ ಗಮನಕ್ಕೆ ಬಂದ ನಂತರ ಶ್ರೀಮಠದಲ್ಲಿ ದೂರು ಸಲ್ಲಿಸುತ್ತಾರೆ. ಜಗದೀಶ್ ಶರ್ಮನ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಮುಖ ವ್ಯಕ್ತಿಗಳು ಮಠದ ಪೀಠಾಧೀಶ ರಾಘವೇಶ್ವರ ಭಾರತಿಯವರನ್ನು ಒತ್ತಾಯಿಸುತ್ತಾರೆ. ಆದರೆ ರಾಘವೇಶ್ವರ ಸ್ವಾಮೀಜಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಬದಲಾಗಿ ಜಗದೀಶ್ ಶರ್ಮನ ರಕ್ಷಣೆಗೆ ನಿಲ್ಲುತ್ತಾರೆ. ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ಕೊಡಿ ಎಂದು ವಿತಂಡವಾದ ಮಾಡುತ್ತಾರೆ. ಯಾಕೆಂದರೆ ಈ ಜಗದೀಶ್ ಶರ್ಮ ಸ್ವಾಮೀಜಿಯ ಖಾಸ ಸೋದರಿಯ ಗಂಡ.

ಮಠದಲ್ಲಿ ನ್ಯಾಯ ದೊರೆಯದ ಕಾರಣ ಅನ್ಯಾಯಕ್ಕೆ ಒಳಗಾದ ಕುಟುಂಬ ಮಾಧ್ಯಮಗಳ ಮುಂದೆ ಬರುತ್ತದೆ. ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಪತ್ರಿಕಾಗೋಷ್ಠಿ ನಡೆಸುತ್ತದೆ. ಆದರೆ ಪ್ರಮುಖ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುವುದಿಲ್ಲ.

ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗಳ ಸಂಪಾದಕರು ಮಠದ ಜತೆ ಒಡನಾಟ ಇಟ್ಟುಕೊಂಡವರು. ಹೀಗಾಗಿ ಅವರು ಸತ್ಯವನ್ನು ಬರೆಯುವುದಕ್ಕೆ ಬದಲಾಗಿ ಸುಮ್ಮನಿದ್ದುಬಿಡುವಂತೆ ನೊಂದ ಕುಟುಂಬಕ್ಕೆ ಒತ್ತಾಯಿಸುತ್ತಾರೆ.

ಮಾಧ್ಯಮಗಳೇ ಹೀಗಾದರೆ ಇನ್ನು ಬಡವರನ್ನು, ಅಸಹಾಯಕರನ್ನು ಕಾಪಾಡುವವರು ಯಾರು? ಎಲ್ಲಿಗೆ ಬಂತು ಪತ್ರಿಕಾವೃತ್ತಿಯ ಮೌಲ್ಯ, ಘನತೆ ಎಂದು ಪ್ರಶ್ನಿಸುತ್ತಾರೆ ದೂರುದಾರರು.

ವಿಜಯಕರ್ನಾಟಕದ ಆಗಿನ ಸಂಪಾದಕ ವಿಶ್ವೇಶ್ವರ ಭಟ್ ಹಾಗು ಕನ್ನಡಪ್ರಭದ ಕೆ.ಶಿವಸುಬ್ರಹ್ಮಣ್ಯಂ ವಿರುದ್ಧ ಹೀಗೊಂದು ದೂರು ಎಡಿಟರ‍್ಸ್ ಗಿಲ್ಡ್ ಆಫ್ ಇಂಡಿಯಾಗೆ ತಲುಪಿದೆ. ಇದೇ ದೂರನ್ನು ಈ ಎರಡು ಪತ್ರಿಕೆಗಳ ಒಡೆಯರಾದ ಸಮೀರ್ ಜೈನ್ ಹಾಗು ಮನೋಜ್ ಕುಮಾರ್ ಸೊಂತಾಲಿಯಾ ಅವರಿಗೂ ಸಲ್ಲಿಸಲಾಗಿದೆ.

ಇಂಥದ್ದೊಂದು ದೂರನ್ನು ಭಾರತ ಮಾಧ್ಯಮ ರಂಗದ ಬಹುಮುಖ್ಯ ಮತ್ತು ಗೌರವಾನ್ವಿತ ಪತ್ರಿಕಾ ಸಂಸ್ಥೆಯೊಂದಕ್ಕೆ ಸಲ್ಲಿಸಲಾಗಿದೆ ಎಂಬುದು ಯಾವ ಪತ್ರಿಕೆಗಳಲ್ಲೂ ವರದಿಯಾಗುವುದಿಲ್ಲ, ಆ ಪರಿಪಾಠವನ್ನು ನಮ್ಮ ಪತ್ರಿಕೆಗಳು ಬೆಳೆಸಿಕೊಂಡು ಬಂದಿಲ್ಲ.

ಇಲ್ಲಿ ಬಹಳ ಮುಖ್ಯವಾಗಿ ಉದ್ಭವಿಸಿರುವ ಪ್ರಶ್ನೆ ಎಂದರೆ, ಹರತಾಳು ಹಾಲಪ್ಪ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಾಗ ಅತ್ಯುತ್ಸಾಹದಲ್ಲಿ ವರದಿ ಮಾಡಿದ ನಮ್ಮ ಮಾಧ್ಯಮಗಳು ರಾಘವೇಶ್ವರ ಮಠದಲ್ಲಿ ನಡೆದ ಲೈಂಗಿಕ ಹಗರಣದ ಕುರಿತು ಮೌನ ವಹಿಸಿದ್ದು ಯಾಕೆ? ಪದೇ ಪದೇ ರಾಘವೇಶ್ವರ ಮಠದಲ್ಲಿ ಸನ್ಮಾನ ಮಾಡಿಸಿಕೊಂಡು ಬಂದ ಪತ್ರಕರ್ತರು ಆತ್ಮಸಾಕ್ಷಿಯನ್ನು ಮಾರಿಕೊಂಡಿದ್ದು ಯಾಕೆ? ಹಾಲಪ್ಪನವರ ಪ್ರಕರಣದಲ್ಲಿ ದೂರು ನೀಡಿದಾಕೆ, ಆಕೆಯ ಪತಿ, ಅವರಿಬ್ಬರ ಹಿಂದೆ ನಿಂತು ರೂಪಿಸಲಾದ ರಾಜಕೀಯ ಮಸಲತ್ತು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಾಘವೇಶ್ವರ ಮಠದಲ್ಲಿ ಆದ ಘಟನೆಗಳಲ್ಲಿ ಅನ್ಯಾಯಕ್ಕೆ ಒಳಗಾದವಳು ಏನೂ ಅರಿಯದ ಪುಟ್ಟ ಬಾಲಕಿ. ಯಾವುದು ಹೆಚ್ಚು ಗಂಭೀರವಾದ ಸುದ್ದಿಯಾಗಬೇಕಿತ್ತು? ಯಾಕೆ ಓರ್ವ ಅಮಾಯಕ ಹುಡುಗಿಗೆ ನ್ಯಾಯವನ್ನು ನಿರಾಕರಿಸಲಾಯಿತು?

ಈ ದೂರನ್ನು ಕೊಟ್ಟಾಗ ಎಡಿಟರ‍್ಸ್ ಗಿಲ್ಡ್‌ನ ಅಧ್ಯಕ್ಷರಾಗಿ ರಾಜದೀಪ್ ಸರ್‌ದೇಸಾಯಿ ಇದ್ದರು. ಈಗ ಅವರು ಮಾಜಿಯಾಗಿದ್ದಾರೆ. ಕೊಟ್ಟ ದೂರು ಏನಾಯಿತೋ ಏನೋ? ಇಂಥದ್ದೇ ದೂರನ್ನು ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾವ್ಯಾಸ್‌ಗೂ ಕೊಡಲಾಗಿದೆ. ಅದೇನಾಯಿತೋ ಗೊತ್ತಿಲ್ಲ.

ಇನ್ನು ರಾಜ್ಯ ಮಾನವ ಹಕ್ಕು ಆಯೋಗ, ರಾಜ್ಯ ಮಹಿಳಾ ಆಯೋಗ ಇವುಗಳಿಗೆ ದೂರು ಕೊಟ್ಟರೂ ಒಂದೇ, ಕೊಡದಿದ್ದರೂ ಒಂದೇ. ಆದರೂ ಈ ಎರಡೂ ಸಂಸ್ಥೆಗಳಿಗೂ ದೂರು ನೀಡಲಾಗಿದೆ.

ಹೀಗೆ ಅಮಾಯಕ ಜನರು ಕೊಟ್ಟ ದೂರುಗಳು ಎಲ್ಲೂ ಕೆಲಸ ಮಾಡದೇ ಹೋದಾಗ, ನ್ಯಾಯ ಒದಗಿಸಲು ನಿಲ್ಲುವವರು ಪತ್ರಕರ್ತರು. ಆದರೆ ಈ ಪ್ರಕರಣದಲ್ಲಿ ಪತ್ರಕರ್ತರೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.

‘ನೀವೂ ಸಹ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲವಾದರೆ, ನಮ್ಮನ್ನು ಯಾರೂ ರಕ್ಷಿಸಲಾರರು ಎಂಬ ಬಡ ಬ್ರಾಹ್ಮಣ ಕುಟುಂಬದ ಆರ್ತನಾದ ಪತ್ರಕರ್ತರ ಅಂತಃಸಾಕ್ಷಿಯನ್ನು ಕಲಕುವುದಿಲ್ಲವೆ?

ಅಂತಹ ಅಂತಃಸಾಕ್ಷಿಗೇ ಧಿಕ್ಕಾರವಿರಲಿ.

0 komentar

Blog Archive