ವಿಜಯ ಕರ್ನಾಟಕದ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ಟರ ಹೊಸ ವೆಬ್‌ಸೈಟು ಕಡೆಗೂ ಅಧಿಕೃತವಾಗಿ ಲಾಂಚ್ ಆಗಿದೆ. ಇದು ಅವರ ಅಭಿಮಾನಿ ಸಮೂಹಕ್ಕೆ ಒಳ್ಳೆಯ ಸುದ್ದಿ. ಆದರೆ ದುರದೃಷ್ಟವೆಂದರೆ ಭಟ್ಟರ ವೆಬ್‌ಸೈಟಿನಿಂದ ಹೊರಡುತ್ತಿರುವುದು ದ್ವೇಷದ ಗಬ್ಬು ವಾಸನೆ. ಭಟ್ಟರಂಥ ಸೂಕ್ಷ್ಮಮತಿಯ ಪತ್ರಕರ್ತರು ಯಾರದೋ ಕೈಗಳಿಗೆ ಸಿಕ್ಕ ಆಟಿಕೆಯಾಗಿ ಹೋದರಾ ಎಂಬ ಅನುಮಾನವೂ ಈ ಸೈಟನ್ನು ಗಮನಿಸಿದರೆ ಗೊತ್ತಾಗುತ್ತದೆ.

ಭಟ್ಟರ ಸೈಟಿನಲ್ಲಿ ಯಶವಂತ ಸರ್‌ದೇಶಪಾಂಡೆಯ ಹೊಸ ಸಿನಿಮಾದ ಘೋಷಣೆಯನ್ನು ಬ್ರೇಕಿಂಗ್ ನ್ಯೂಸ್ ಎಂಬ ವಿಭಾಗದಲ್ಲಿ ಪ್ರಕಟಿಸಲಾಗಿದೆ. ಇದು ನೇರಾನೇರವಾಗಿ ರವಿಬೆಳಗೆರೆಗೆ ಹೊಡೆ ಬಾಣ ಎಂಬುದು ಗೊತ್ತಾಗುತ್ತದೆ. ಇದೊಂದು ಭಾವನಾತ್ಮಕ, ಚೇತೋಹಾರಿ, ಕರ್ಣ ಇಂಪಿನ ಚಿತ್ರ ಎಂಬ ವಾಕ್ಯದಲ್ಲೇ ಭಟ್ಟರ ಸೆಂಟಿನ ಘಮ ಹೊರಡುತ್ತದೆ. ತಮ್ಮ ನಡುವಿನ ಜಗಳಕ್ಕೆ ಹೀಗೆ ಮಕ್ಕಳನ್ನೂ ಸಹ ಎಳೆದು ತರಬೇಕಾ? ಪತ್ರಕರ್ತರ ನಡುವಿನ ಸಂಘರ್ಷ ತೀರಾ ಇಷ್ಟು ವೈಯಕ್ತಿಕ ಮಟ್ಟಕ್ಕೆ ಇಳಿಯಬೇಕಾ?

ಕೇಳ್ರಪ್ಪೋ ಕೇಳಿ ಎಂಬ ಅಂಕಣದಲ್ಲಿ ಭಟ್ಟರನ್ನು ಓದುಗರು ಪ್ರಶ್ನೆ ಕೇಳಬಹುದಂತೆ. ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಭಟ್ಟರು ಕೊಟ್ಟಿರುವ ಉತ್ತರಗಳು ಬಾಲಿಷ ಮಾತ್ರವಲ್ಲ ಮೂರನೇ ದರ್ಜೆಯವು. ಒಂದು ಪ್ರಶ್ನೆ ಮತ್ತು ಉತ್ತರವನ್ನು ಉದಾಹರಣೆಗೆ ಗಮನಿಸಿ:

ಪ್ರತಾಪ ಸಿಂಹ ನಿಜಕ್ಕೂ ಚಡ್ಡಿನಾ?
- ಆತ ಚಡ್ಡಿ ಹೌದೋ ಅಲ್ಲವೋ ಎಂಬುದನ್ನು ನೀವೇ ನಿರ್ಧರಿಸಬೇಕು. ಆದರೆ ಅವನು ತನ್ನ ಅಂಕಣದಲ್ಲಿ ಎಲ್ಲರ ಚಡ್ಡಿಯನ್ನು ಬಿಚ್ಚುವುದರಿಂದ ಬೆತ್ತಲೆ ಜಗತ್ತು ಅಂತ ಹೆಸರಿಟ್ಟುಕೊಂಡಿದ್ದಾನೆ.

ಇದೇ ಅಂಕಣದಲ್ಲಿ ರವಿ ಬೆಳಗೆರೆ ಜತೆಗಿನ ಸ್ನೇಹವನ್ನು ಭಟ್ಟರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಭಟ್ಟರು ಆಪ್ತಕಾಲ ಎಂಬ ಇನ್ನೊಂದು ಅಂಕಣದಲ್ಲಿ ಬರೆದಿರುವ ನಾಗರ ಹಾವು-ಸಗಣಿ ಹುಳದ ಲೇಖನ ಬೇರೆಯದನ್ನೇ ಹೇಳುತ್ತಿದೆ.
ಇದುವರೆಗೆ ಭಟ್ಟರ ಸೈಟಿನಲ್ಲಿ ಕಾಣಿಸಿಕೊಂಡಿರುವ ಕಮೆಂಟುಗಳೋ ತಾಯಿ ರಾಜರಾಜೇಶ್ವರಿಗೇ ಪ್ರೀತಿ.

ವಿಜಯ ಕರ್ನಾಟಕ ಬಿಟ್ಟ ನಂತರ ಭಟ್ಟರು ದೊಡ್ಡ ಸದ್ದಿನೊಂದಿಗೆ ಹಿಂದಿರುಗುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಮಾಧ್ಯಮ ಕ್ಷೇತ್ರದ ಕುರಿತು ಕುತೂಹಲ ಇಟ್ಟುಕೊಂಡ ಬಹಳಷ್ಟು ಮಂದಿಗೆ ಇತ್ತು. ಆದರೆ ವೆಬ್‌ಸೈಟ್‌ನ ಒಂದು ಸಣ್ಣ ಪ್ರಯತ್ನವನ್ನೂ ಸಹ ಅವರು ಸರಿಯಾಗಿ ನಿರ್ವಹಿಸದೆ ಎಡವಿದ್ದಾರೆ.

ಭಟ್ಟರಿಗೆ ಗೊತ್ತಿರುವ ಒಂದು ವಿಚಾರ ಅವರಿಗೆ ನೆನಪಿಸುವುದು ಒಳ್ಳೆಯದು ಎನಿಸುತ್ತದೆ. ದ್ವೇಷದ, ಸೇಡಿನ ಒಡಲಲ್ಲಿ ಹುಟ್ಟುವ ಯಾವುದೇ ಸಾಹಿತ್ಯ, ಕಲೆ ಗಬ್ಬು ನಾರುತ್ತವೆ. ಅದನ್ನು ಅವರವರೇ ಆಘ್ರಾಣಿಸಿಕೊಂಡು ನರಳಬೇಕು. 

ವಾಸನೆ ಸೃಷ್ಟಿಕರ್ತರು ನೀವೇ ಆದ್ದರಿಂದ ನೀವು ಅದನ್ನು ಆಸ್ವಾದಿಸಬಹುದು. ಆದರೆ ಅದು ಬೇರೆಯವರ ಪಾಲಿಗೆ ಸಹನೀಯವಾಗಿರುವುದಿಲ್ಲ.
0 komentar

Blog Archive