ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು. ಈಗ ನೋಡಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಹೇಗೆ ನಮ್ಮ ಕನ್ನಡದ ಪತ್ರಿಕೆಗಳು ಪ್ರಕಟಿಸಿದವು ಎಂಬುದೇ ಸಾಕಷ್ಟು ಕುತೂಹಲಕರವಾಗಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ನಡೆಸಿದವರು ಭಯೋತ್ಪಾದಕರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನವಾದರೂ ನಮ್ಮ ಪತ್ರಿಕೆಗಳಿಗೆ ಆತ ಕೇವಲ ವ್ಯಕ್ತಿ ಮಾತ್ರ. ಹಿಂದೆಲ್ಲ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಗಳು ಬಂದಾಗ ಬಂಧನಕ್ಕೊಳಗಾದ ವ್ಯಕ್ತಿಗೆ ಶಂಕಿತ ಭಯೋತ್ಪಾದಕ ಎಂಬ ವಿಶೇಷಣ ಹಚ್ಚಿ ಬರೆಯಲಾಗುತ್ತಿತ್ತು. ಹೀಗೆ ಬಂಧನಕ್ಕೊಳಗಾದವರೆಲ್ಲ ಮುಸ್ಲಿಮರೆ ಆಗಿದ್ದರು. ಪ್ರವೀಣ್ ಮುತಾಲಿಕ್ ವಿಷಯದಲ್ಲಿ ಮಾತ್ರ ಅದು ಕಾಣೆಯಾಗಿದೆ, ಯಾಕೆ? ಆತನಿಗೆ ಯಾರೂ ಶಂಕಿತ ಭಯೋತ್ಪಾದಕ ಎಂದು ಬರೆಯಲಿಲ್ಲವೇಕೆ?

ಭಯೋತ್ಪಾದನಾ ಚಟುವಟಿಕೆ ನಡೆಸಿದ ಮುಸ್ಲಿಮರನ್ನು ಮುಸ್ಲಿಂ ಭಯೋತ್ಪಾದಕ ಎಂದು ಕರೆಯುವುದಾದರೆ, ಕರ್ನಾಟಕದ ಮಟ್ಟಿಗೆ ಬಂಧನಕ್ಕೊಳಗಾದ ಮೊದಲ ಶಂಕಿತ ಹಿಂದೂ ಭಯೋತ್ಪಾದಕ ಪ್ರವೀಣ್ ಮುತಾಲಿಕ್. ಆದರೆ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅವಕಾಶಗಳಿದ್ದರೂ ಯಾಕೆ ಆ ಕೆಲಸವನ್ನು ಪತ್ರಿಕೆಗಳು ಮಾಡಲಿಲ್ಲ?

ಫೆ.೨ರ ಎಲ್ಲ ಪತ್ರಿಕೆಗಳನ್ನು ಒಮ್ಮೆ ತಿರುವಿ ನೋಡಿ. ವಿಜಯ ಕರ್ನಾಟಕದಲ್ಲಿ ಮೊದಲ ಪುಟದಲ್ಲೇ ವರದಿ ಪ್ರಕಟವಾಗಿದೆ. ಬಹುಶಃ ವಿಜಯ ಕರ್ನಾಟಕ ಬದಲಾಗಿರುವುದಕ್ಕೆ ಇದು ಸಾಕ್ಷಿಯಿರಬಹುದು. ಕನ್ನಡಪ್ರಭದ ೮ನೇ ಪುಟದಲ್ಲಿ ಐದು ಸಾಲಿನ ವರದಿ ಬಂದಿದ್ದರೆ, ಉದಯವಾಣಿ, ಸಂಯುಕ್ತ ಕರ್ನಾಟಕಗಳಲ್ಲಿ ಸುದ್ದಿಯೇ ಇಲ್ಲ. ಪ್ರಜಾವಾಣಿ ಬೆಳಗಾವಿ ಮತ್ತು ಮುಂಬೈ ಡೇಟ್‌ಲೈನ್‌ಗಳಲ್ಲಿ ಎರಡು ಸಿಂಗಲ್ ಕಾಲಂ ಸುದ್ದಿಗಳು ಪ್ರಕಟಗೊಂಡಿವೆ. ಪಾಪ, ಅವರಿಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿರಲಿಲ್ಲ.

ಇನ್ನುಳಿದಂತೆ ಮುತಾಲಿಕ್ ಬಂಧನವನ್ನು ಅಗ್ರ ಸುದ್ದಿ ಮಾಡಿರುವುದು ವಾರ್ತಾಭಾರತಿ ಪತ್ರಿಕೆ ಮಾತ್ರ.

ಈ ಕುರಿತು ವಾರ್ತಾಭಾರತಿ ಅಭಿಮಾನಿಗಳ ಬಳಗ ಎಂಬ ಬ್ಲಾಗ್‌ನಲ್ಲಿ ಇನ್ನಷ್ಟು ವಿಶ್ಲೇಷಣೆಗಳಿವೆ. ಹಿಂದಿನ ಕೆಲವು ಘಟನೆಗಳ ಸಂದರ್ಭದಲ್ಲಿ ನಮ್ಮ ಪತ್ರಿಕೆಗಳು ಹೇಗೆ ವರ್ತಿಸಿದ್ದವು ಎಂಬುದರ ಕುರಿತೂ  ಈ ಬ್ಲಾಗ್‌ನಲ್ಲಿ ಬೆಳಕು ಚೆಲ್ಲಲಾಗಿದೆ. ಒಮ್ಮೆ ಆ ಬ್ಲಾಗ್ ನೋಡಿ ಬನ್ನಿ. ಈ ಬ್ಲಾಗ್ ಕೊಂಡಿಯನ್ನು ಕಳುಹಿಸಿದ ಗೆಳೆಯರಿಗೆ ಧನ್ಯವಾದ.

ಪ್ರೊ. ಬರಗೂರು ರಾಮಚಂದ್ರಪ್ಪ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಹಿಂದೆಲ್ಲ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಲೇ ಎಲ್ಲ ಭಯೋತ್ಪಾದಕರು ಮುಸ್ಲಿಮರು ಎಂದು ವಾದ ಮಾಡುತ್ತಿದ್ದರು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಎಲ್ಲ ಭಯೋತ್ಪಾದಕರು ಮುಸ್ಲಿಮರಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದರು.

ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು, ಇದೇ ಕೃತ್ಯ ಮಾಡಿದ ಹಿಂದೂಗಳಲ್ಲ ಎಂಬುದು ನಮ್ಮ ಪತ್ರಿಕೆಗಳ ನಿಲುವಾಗಿರಬಹುದು.

ನಮ್ಮ ಮೀಡಿಯಾಗಳು ಇಂಥ ಬೇಜವಾಬ್ದಾರಿ ನಿಲುವನ್ನು ಬದಲಿಸಿಕೊಳ್ಳಲು ಇದು ಸಕಾಲ.
0 komentar

Blog Archive