ಸ್ವಲ್ಪ ದಿನ ರಜೆ ತಗೋತೀವಿ ಅಂದಿದ್ವಿ. ಆದರೆ ಈಗ ಬರೀಲೇಬೇಕು. ಬದುಕು ಜಟಕಾ ಬಂಡಿಯಲ್ಲಿ ನರೇಂದ್ರ ಶರ್ಮ ಅವರ ದರ್ಶನವಾಗಿದೆ. ಅದು ನಮಗಾಗಿ ನಡೆದ ಕಾರ್ಯಕ್ರಮ. ನೀವು, ನಾವೆಲ್ಲ ಬರೆದ ನೂರಾರು ಪತ್ರಗಳಿಗೆ ಉತ್ತರವಾಗಿ ನಡೆದ ಕಾರ್ಯಕ್ರಮ. ಹೀಗಾಗಿ ಆ ಕುರಿತು ಬರೆಯಲೇಬೇಕು.

ನಿನ್ನೆ ರಾತ್ರಿ ೯ ಗಂಟೆಗೆ ಪ್ರಸಾರವಾದ ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವಿನಾಶ್ ಅವರು ನರೇಂದ್ರ ಶರ್ಮ ಜತೆ ಸಂವಾದ ನಡೆಸಿದರು, ಜತೆಗೊಂದಿಷ್ಟು ಮಂದಿ ವೀಕ್ಷಕರು. ಇದು ಅತ್ಯಂತ ವ್ಯವಸ್ಥಿತವಾಗಿ ನರೇಂದ್ರ ಶರ್ಮ ಅವರನ್ನು ಸಮರ್ಥಿಸಲು ನಡೆದ ಕಾರ್ಯಕ್ರಮ. ಆದರೆ, ಇಂಥ ಕಾರ್ಯಕ್ರಮವನ್ನೂ ಸಹ ಜಾಣತನದಿಂದ ಬಳಸಿಕೊಳ್ಳಲು ಶರ್ಮ ವಿಫಲರಾದರು. ಅವರ ಬಾಯಿಹರುಕುತನ ಅವರ ಇನ್ನಷ್ಟು ವಿಕೃತಿಗಳನ್ನು ಅನಾವರಣಗೊಳಿಸಿತು.

ಪ್ರಳಯ ತಪ್ಪಿಸಲು ಐದು ಎಣ್ಣೆಯ ದೀಪಗಳನ್ನು ಹಚ್ಚಲು ಶರ್ಮ ನೀಡಿದ ಕರೆ, ಅದಕ್ಕೆ ಕರ್ನಾಟಕದ ಮುಗ್ಧ ಹೆಣ್ಣುಮಕ್ಕಳು ಪ್ರತಿಸ್ಪಂದಿಸಿದ ರೀತಿಯನ್ನು ಗಮನಿಸಿ, ಗಾಬರಿಯಾಗಿ ನಾವು ಮೊದಲು ಈ ವ್ಯಕ್ತಿಯ ಕುರಿತು ಬರೆದಿದ್ದೆವು. ನಂತರದ ದಿನಗಳಲ್ಲಿ ನರೇಂದ್ರ ಶರ್ಮ ಅವರನ್ನು ನಾವೆಲ್ಲರೂ ಸೇರಿ ಬಯಲುಗೊಳಿಸುತ್ತಾ ಹೋದೆವು, ಕನ್ನಡದ ಬ್ಲಾಗರ್‌ಗಳು ಒಬ್ಬರಾದ ಮೇಲೊಬ್ಬರಂತೆ ಬೃಹತ್ ಬ್ರಹ್ಮಾಂಡದ ಠೊಳ್ಳುತನವನ್ನು ಬಹಿರಂಗಪಡಿಸುತ್ತ ಬಂದರು. ಫೇಸ್‌ಬುಕ್‌ನಲ್ಲೊಂದು ಗುಂಪನ್ನೂ ಸೃಷ್ಟಿಸಿದೆವು. ನೂರಾರು ಪತ್ರಗಳು ಜೀ ಟಿವಿಗೆ ಹೋದ ನಂತರ ಅವರು ಏನನ್ನಾದರೂ ಮಾಡಲೇಬೇಕಿತ್ತು. ಮಾಡಿದ್ದು ಬದುಕು ಜಟಕಾ ಬಂಡಿ. ನರೇಂದ್ರ ಶರ್ಮ ಅವರೇ ಅದರ ಸಾಹೇಬ.

ನಿಜ, ಇದು ಜೀ ಟಿವಿಯವರು ನರೇಂದ್ರ ಶರ್ಮ ವಿರುದ್ಧದ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸಲು ನಡೆಸಿದ ಪ್ರಯತ್ನ. ನಮ್ಮ ಪ್ರಶ್ನೆಗಳಿಗೆ ನರೇಂದ್ರ ಶರ್ಮ ಅವರಿಂದಲೇ ಉತ್ತರ ಕೊಡಿಸಿ ತೇಪೆ ಹಚ್ಚುವ ಯತ್ನ. ಆದರೆ ಬದುಕು ಜಟಕಾ ಬಂಡಿ ನಡೆಸಿಕೊಡುವ ಮಾಳವಿಕಾ ಅವಿನಾಶ್ ನಾವು ಮಾಡಬೇಕು ಎಂದುಕೊಂಡಿದ್ದನ್ನು ತಾವೇ ಮಾಡಿದ್ದಾರೆ. ನರೇಂದ್ರ ಶರ್ಮ ಅವರನ್ನು ಇನ್ನಷ್ಟು ಎಕ್ಸ್‌ಪೋಸ್ ಮಾಡಿದ್ದಾರೆ. ನರೇಂದ್ರ ಶರ್ಮಾ ಮಾತುಗಳನ್ನು ಕೇಳಿ ಮಾಳವಿಕಾ ಎಷ್ಟೋ ಸಲ ಬೆಚ್ಚಿ ಬಿದ್ದರು, ಸಿಟ್ಟಿಗೆದ್ದರು, ಪರಮಾಶ್ಚರ್ಯದ ಉದ್ಘಾರ ಹೊರಡಿಸಿದರು, ಹತಾಶೆಯಿಂದ ಸುಮ್ಮನಾದರು. ಮಾಳವಿಕಾ ಕನ್ನಡದ ಒಬ್ಬ ಸಭ್ಯ, ಸುಸಂಸ್ಕೃತ ಹೆಣ್ಣುಮಗಳಾಗಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಬಾರಿ ಅನುನಯದಿಂದ, ಮತ್ತೆ ಕೆಲವೊಮ್ಮೆ ಅನುಕಂಪದಿಂದ. ಉತ್ತರಗಳು ಮಾತ್ರ ದುರಹಂಕಾರದ್ದು, ಠೊಳ್ಳುತನದ್ದು, ವಿತಂಡವಾದದ್ದು...

ನಿನ್ನೆ ಈ ಸಂವಾದವನ್ನು ನೋಡಿದವರಿಗೆ ಈ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಯಾಕೆ ವಿರೋಧಿಸಲಾಗುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಹೀಗೆ ಅರ್ಥ ಮಾಡಿಸುವ ಕೆಲಸವನ್ನು ಮಾಳವಿಕಾ ತಮಗೇ ಗೊತ್ತಿಲ್ಲದಂತೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ.

ಇನ್ನು ಈ ಸಂವಾದದಲ್ಲಿ ನರೇಂದ್ರ ಶರ್ಮ ಹೇಳಿದ್ದೇನು? ಇಡೀ ಸಂವಾದದಲ್ಲಿ ನಾವು ಜೀ ಟಿವಿ ಮುಖ್ಯಸ್ಥರಿಗೆ ಬರೆದ ಬಹಿರಂಗ ಆಗ್ರಹ ಪತ್ರದ ಪ್ರಶ್ನೆಗಳನ್ನು ಯಥಾವತ್ತಾಗಿ ನರೇಂದ್ರ ಶರ್ಮ ಅವರಿಗೆ ಕೇಳಲಾಗುತ್ತಿತ್ತು. ಮಾಳವಿಕಾ ನಮ್ಮ ಪತ್ರದ ಒಂದು ಪ್ರತಿಯನ್ನು ಕೈಯಲ್ಲಿ ಇಟ್ಟುಕೊಂಡೇ ಕುಳಿತಿದ್ದರು. ನರೇಂದ್ರ ಶರ್ಮ ತನ್ನ ಮಾಮೂಲಿ ಉಡಾಫೆಯ ಶೈಲಿಯಲ್ಲೇ ಉತ್ತರಿಸುತ್ತಾ ಹೋದರು.

ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನಾನು ಹೇಳಿದ್ದು ನಿಜ. ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್, ಚೂಡಿದಾರ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ಈ ಡ್ರೆಸ್‌ಗಳನ್ನು ಹಾಕಿಕೊಂಡರೆ ಗಾಳಿಯಾಡೋದಿಲ್ಲ. ಕುಜ ಪ್ರಭಾವ ಬೀರೋದು ಗರ್ಭದ ಮೇಲೆ. ಹೀಗಾಗಿ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನರೇಂದ್ರ ಶರ್ಮ ಯಾವುದೇ ಭಿಡೆ ಇಲ್ಲದೆ ಹೇಳಿದರು.

ಇದರಿಂದ ಗಾಬರಿಗೊಂಡ ಮಾಳವಿಕಾ ನಾನು ೩೦ ವರ್ಷದಿಂದ ಚೂಡಿದಾರ್ ಹಾಕುತ್ತಾ ಬಂದಿದ್ದೇನೆ, ನನಗೆ ಕ್ಯಾನ್ಸರ್ ಬಂದಿಲ್ಲವಲ್ಲ? ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು.

ಯಾಕೆ ನೀವು ಮುಂಡೇವಾ ಇತ್ಯಾದಿಯಾಗಿ ಬೈಯುತ್ತೀರಾ, ಅಸಭ್ಯವಾಗಿ ಮಾತನಾಡುತ್ತೀರಾ ಎಂದು ಕೇಳಿದರೆ ನರೇಂದ್ರ ಶರ್ಮ ಅವರದು ಮಾಮೂಲಿ ಒರಟು ಉತ್ತರ. ಅದು ನನ್ನ ಶೈಲಿ, ನಾನು ಇರೋದೇ ಹೀಗೆ ಇತ್ಯಾದಿ. ನೀವು ಇದನ್ನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ, ಸಾರ್ವಜನಿಕ ಟಿವಿ ಕಾರ್ಯಕ್ರಮಗಳಲ್ಲಿ ಹೀಗೆ ಮಾತನಾಡೋದು ಸರೀನಾ ಎನ್ನುತ್ತಾರೆ ಮಾಳವಿಕಾ. ಇಲ್ಲೂ ನಾನು ಹೀಗೇ ಮಾತಾಡೋದು ಎಂಬ ದುರಹಂಕಾರದ ಉತ್ತರ ಶರ್ಮಾ ಅವರದು. ನಿಮ್ಮ ಹತ್ರ ಬೈಸಿಕೊಳ್ಳೋಕೆ ನಮಗೇನು ಹಣೆಬರೆಹ ಎನ್ನುತ್ತಾರೆ ಮಾಳವಿಕಾ. ನೀವ್ಯಾಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ ಎಂದು ಮಾಳವಿಕಾ ಅವರನ್ನೇ ಗದರಿದರು ಸನ್ಮಾನ್ಯ ಶರ್ಮ ಅವರು.

ಸಾರ್ವಜನಿಕ ಜೀವನದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು. ನಮ್ಮ ಭಾಷೆಯ ಮೇಲೆ ಹತೋಟಿ ಇರಬೇಕು. ಅದು ಸಂಸ್ಕಾರವಲ್ಲವೇ ಎಂದು ಮಾಳವಿಕಾ ಪ್ರಶ್ನಿಸಿದರೆ ನರೇಂದ್ರ ಶರ್ಮ ಏನನ್ನೋ ಮಾತನಾಡಲು ಹೋಗಿ ಗೊಂದಲವೆಬ್ಬಿಸುತ್ತಾರೆ. ಸಹನೆಯಿಂದಲೇ ಮಾತನಾಡುತ್ತಿದ್ದ ಮಾಳವಿಕಾ ತಾಳ್ಮೆ ಕಳೆದುಕೊಂಡಹಾಗೆ ಕಾಣುತ್ತದೆ.

ತಾನು ಮದುವೆಯಾಗಿಲ್ಲ, ಆಗೋದು ಇಲ್ಲ. ಆದರೆ ಬ್ರಹ್ಮಾಚಾರಿಯಲ್ಲ ಎಂದು ನರೇಂದ್ರ ಶರ್ಮ ಹೇಳಿಕೊಳ್ಳುತ್ತಾರೆ. ಯಾಕೆ ಹೀಗೆ ಎಂದರೆ, ಚಿನ್ನದ ಪಂಜರ, ಹಕ್ಕಿ... ಇತ್ಯಾದಿ ಏನನ್ನೋ ಹೇಳಲು ಹೊರಡುತ್ತಾರೆ. ಇತರ ಧರ್ಮಗುರುಗಳನ್ನು ನಿಂದಿಸಲು ಆರಂಭಿಸುತ್ತಾರೆ. ಮಾಳವಿಕಾ ಅದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ವಿಷಯ ಮಾತ್ರ ಹೇಳಿ, ಬೇರೆಯವರ ವಿಷಯ ಬೇಡ ಎಂದು ತಾಕೀತು ಮಾಡುತ್ತಾರೆ.

ಪ್ರಳಯವೆಲ್ಲ ನಡೆದು, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿಯುತ್ತದೆ ಎಂದು ನಾನೆಲ್ಲೂ ಹೇಳಿಲ್ಲ. ಉತ್ತರ ಭಾಗವೆಲ್ಲ ಮುಳುಗಿ ದಕ್ಷಿಣ ಮಾತ್ರ ಉಳಿಯುತ್ತದೆ ಎಂದು ಮಾತ್ರ ಹೇಳಿದ್ದೇನೆ ಎನ್ನುತ್ತಾರೆ ನರೇಂದ್ರ ಶರ್ಮ. ಆದರೆ ಬೆಳಗಾವಿಯ ಒಂದು ಹಳ್ಳಿ ದೇಶದ ರಾಜಧಾನಿಯಾಗುತ್ತದೆ ಎನ್ನುತ್ತಾರೆ. ಪ್ರಳಯ ನಿಜವಾಗಲೂ ಆಗುತ್ತಾ ಎಂದರೆ ಈಗ ಆಗ್ತಾ ಇರೋದು ಏನು? ಜಪಾನ್‌ನಲ್ಲಿ ಸುನಾಮಿ ಆಗುತ್ತೆ ಎಂದು ನಾನು ಹೇಳಿರಲಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಮಾಳವಿಕಾ ಸಾಕಷ್ಟು ಪ್ರತಿರೋಧದ ಪ್ರಶ್ನೆಗಳನ್ನು ಎಸೆಯುತ್ತಾರೆ. ಜಪಾನ್‌ನಲ್ಲಿ ಹಿಂದೆ ನೂರಾರು ಬಾರಿ ಭೂಕಂಪ ಆಗಿದೆ. ಸುನಾಮಿ ಕೂಡ ಆಗಿದೆ. ನೀವು ಹೇಳಿದ್ದಕ್ಕೆ ಆಗಬೇಕಿಲ್ಲ ಎಂದು ಹೇಳಿದರೂ ಶರ್ಮಾ ಒಪ್ಪುವುದಿಲ್ಲ.

ಸುನಾಮಿ ಅಂದ್ರೆ ಏನು, ಸ್ವಲ್ಪ ವೈಜ್ಞಾನಿಕವಾಗಿ ಹೇಳಿ ಎಂದರೆ ಮೊದಲು ಸುನಾಮಿಗೂ ಭೂಮಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ನಂತರ ಭೂಮಿ, ಪಾತಾಳ, ಪ್ಲೇಟು, ಸೂರ್ಯ ಕಿರಣ ಇತ್ಯಾದಿ ಏನನ್ನೋ ಹೇಳಿ ಮುಗಿಸುತ್ತಾರೆ. ಇದನ್ನು ಸೈನ್ಸ್ ಹೇಳುತ್ತಾ ಎಂದು ಮಾಳವಿಕಾ ಪ್ರಶ್ನಿಸಿದರೆ, ಸೈನ್ಸ್ ಯಾಕೆ, ನಾನು ಹೇಳ್ತೀನಿ ಎಂಬ ಉದ್ಧಟತನದ ಉತ್ತರ.

ನರೇಂದ್ರ ಶರ್ಮ ತನ್ನನ್ನು ತಾನು ಜ್ಯೋತಿಷಿ ಅಲ್ಲವೆಂದು ಈ ಕಾರ್ಯಕ್ರಮದಲ್ಲಿ ಘೋಷಿಸಿಕೊಂಡರು. ಬದಲಾಗಿ ಧರ್ಮದರ್ಶಿ ಎಂದು ಕರೆದುಕೊಂಡರು. ಅವರ ಪ್ರಕಾರ ಜ್ಯೋತಿಷ್ಯ ನಿಜ, ಜ್ಯೋತಿಷಿ ಸುಳ್ಳು. ಶಾಸ್ತ್ರ ನಿಜ, ಶಾಸ್ತ್ರಿ ಸುಳ್ಳು. ಅವರು ಆಲ್‌ರೌಂಡರ್ ಇದ್ದ ಹಾಗಂತೆ. ತನ್ನನ್ನು ತಾನು ಎಲ್ಲವನ್ನೂ ಬಲ್ಲವನು ಎಂದವರು ಘೋಷಿಸಿಕೊಂಡರು. ಎಂತೆಂಥ ದೊಡ್ಡ ದೊಡ್ಡ ಮಹಾತ್ಮರೂ ಸಹ ತಮ್ಮನ್ನು ತಾವು ಎಲ್ಲ ಬಲ್ಲವರು ಎಂದು ಹೇಳಿಕೊಳ್ಳಲಿಲ್ಲ, ಹಾಗೆ ಘೋಷಿಸಿಕೊಂಡ ಮೊದಲ ವ್ಯಕ್ತಿ ನೀವೇನೇ ಎಂದರು ಮಾಳವಿಕಾ. ನಾನು ದೇವರನ್ನು ನೋಡಿದ್ದೇನೆ ಎಂದು ಹೇಳಿಕೊಂಡರು ಶರ್ಮ. ಹೇಗಿದ್ದರು ದೇವರು ಎಂದರೆ ಮುದುಕಿ ರೂಪದಲ್ಲಿ, ಮಗುವಿನ ರೂಪದಲ್ಲಿ ಎಂಬ ಉತ್ತರ. ದೇವರ ಹಾಗೆ ಕಾಣಿಸೋದು ಬೇರೆ, ದೇವರನ್ನೇ ನೋಡೋದು ಬೇರೆ ಎಂದು ಮಾಳವಿಕಾ ಹೇಳಿದಾಗ, ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಹೇಳಿಕೊಂಡರು ಅವರು.

ಕಾರ್ಯಕ್ರಮದ ಮಧ್ಯೆ ಮಧ್ಯೆ ನರೇಂದ್ರ ಶರ್ಮ ಅವರ ಅನುಯಾಯಿಗಳಿಂದ ಪ್ರತ್ಯೇಕ ಬೈಟ್‌ಗಳು. ಗುರೂಜಿಯಿಂದ ನಮಗೆ ಒಳ್ಳೆಯದಾಗಿದೆ, ಅವರು ನಮ್ಮ ಬಾಳು ಬೆಳಗಿದರು ಇತ್ಯಾದಿ ಪರಾಕುಗಳು. ಕಡೆಗೆ ಮಾಳವಿಕಾ ಸಹ ಶರ್ಮಾ ಅವರನ್ನು ಅಭಿನಂದಿಸಿ ಕಾರ್ಯಕ್ರಮ ಮುಗಿಸುತ್ತಾರೆ.

ಕಡೆಯದಾಗಿ ನರೇಂದ್ರ ಶರ್ಮ, ತನ್ನ ವಿರುದ್ಧ ಟೀಕೆ ಮಾಡುವವರಿಗೆ ಉತ್ತರ ಹೇಳಲು ಯತ್ನಿಸುತ್ತಾರೆ. ನನ್ನಿಂದಲೂ ತಪ್ಪಾಗಿದ್ದರೆ, ಅದನ್ನು ಸರಿಯಾಗಿ ತನ್ನ ಗಮನಕ್ಕೆ ತಂದರೆ ತಿದ್ದಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಹಿನ್ನೆಲೆ ಧ್ವನಿಯೊಂದು ಕೇಳಿಬರುತ್ತದೆ. ಅಂತರ್ಜಾಲದಲ್ಲಿ ಬೃಹತ್ ಬ್ರಹ್ಮಾಂಡ ಕುರಿತು ನಕಾರಾತ್ಮಾಕ ಆಂದೋಲನ ನಡೆಸುತ್ತಿರುವವರಿಗೆ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಗಿತ್ತು. ಯಾರೂ ಬರಲಿಲ್ಲ. ಆದರೂ ಗುರೂಜಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು... ಇತ್ಯಾದಿ ಹೇಳುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಏ.೨೭ರಂದು ಈ ಕಾರ್ಯಕ್ರಮದ ಚಿತ್ರೀಕರಣದ ಶೂಟಿಂಗ್ ನಡೆದಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಬೆಳಿಗ್ಗೆ ೧೧ ಗಂಟೆಗೆ. ಅದೂ ತಮ್ಮ ಪತ್ರದಲ್ಲಿ ಮೊಬೈಲ್ ನಂಬರ್ ದಾಖಲಿಸಿದ ಕೆಲವರಿಗೆ ಮಾತ್ರ. ಕೆಂಗೇರಿ ಬಳಿಯ ಸ್ಟುಡಿಯೋದಲ್ಲಿ ನಡೆದ ಈ ಚಿತ್ರೀಕರಣಕ್ಕೆ ಕನಿಷ್ಠ ಒಂದು ದಿನ ಮೊದಲು ತಿಳಿಸಬಹುದಿತ್ತಲ್ಲವೇ? ಈ ಸತ್ಯ ಗೊತ್ತಿದ್ದೂ ಆಹ್ವಾನ ಕೊಟ್ಟರೂ ಯಾರೂ ಬರಲಿಲ್ಲ ಎಂದು ಹೇಳುವ ಆತ್ಮವಂಚನೆ ಯಾಕೆ? (ಇದನ್ನು ನಾವು ಅಂದೇ ಫೇಸ್‌ಬುಕ್‌ನ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಗುಂಪಿನಲ್ಲಿ ಬರೆದಿದ್ದೆವು.)

ಜೀ ಟಿವಿ ಮುಖ್ಯಸ್ಥರಿಗೆ ಈಗ ಕೇಳಬೇಕಾದ ಹಲವು ಹೊಸ ಪ್ರಶ್ನೆಗಳಿವೆ:
೧. ನಿನ್ನೆ ನಡೆದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ಹಕೀಕತ್ತೇನು? ಇದರ ನಿಜವಾದ ಉದ್ದೇಶವೇನು?
೨. ನಿನ್ನೆಯ ಕಾರ್ಯಕ್ರಮ ನರೇಂದ್ರ ಶರ್ಮ ಅವರ ಠೊಳ್ಳುತನ, ಬಾಯಿಹರುಕತನ ಇನ್ನಷ್ಟು ಸ್ಪಷ್ಟವಾಗಿ ಬಹಿರಂಗಗೊಳಿಸುತ್ತದೆ. ಇನ್ನಾದರೂ ಈ ಕಾರ್ಯಕ್ರಮ ನಿಲ್ಲಿಸಬಹುದಲ್ಲವೆ?
೩. ನರೇಂದ್ರ ಶರ್ಮ ಅವರಿಂದ ಈ ಬಗೆಯ ಉದ್ಧಟತನದ ಸ್ಪಷ್ಟನೆಗಳನ್ನು ಕೊಡಿಸಿದ ಮಾತ್ರಕ್ಕೆ ಈ ಕಾರ್ಯಕ್ರಮದಿಂದ ಆಗಿರುವ ಅನಾಹುತಗಳನ್ನು ಮರೆಯಬಹುದೇ?
೪. ಇಷ್ಟೆಲ್ಲ ಆದರೂ ಆತ ಜೀನ್ಸ್ ಪ್ಯಾಂಟ್, ಚೂಡಿದಾರ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎನ್ನುತ್ತಾರೆ. ಅದರರ್ಥ ಕರ್ನಾಟಕದ ಅರ್ಧಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಂದರೆ ಎರಡು ಕೋಟಿಯಷ್ಟು ಹೆಂಗಸರಿಗೆ, ದೇಶದ ೨೦-೩೦ ಕೋಟಿ ಹೆಣ್ಣುಮಕ್ಕಳಿಗೆ ಆ ಖಾಯಿಲೆ ಬರಬೇಕು. ಹೀಗೆಲ್ಲ ಹೇಳುವ ಅನಾಹುತಕಾರಿ ಏಡ್ಸ್ ರೋಗವನ್ನು ನಿಮ್ಮ ಜತೆ ಇನ್ನೆಷ್ಟು ದಿನ ಇಟ್ಟುಕೊಳ್ಳುತ್ತೀರಿ?

ಜೀ ಟಿವಿ ಮುಖ್ಯಸ್ಥರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಾರರು.

ಒಂದೇ ಒಂದು ಸವಾಲು. ನರೇಂದ್ರ ಶರ್ಮ ನಿನ್ನೆ ಹೇಳಿಕೊಂಡ ಅವರ ಶೈಕ್ಷಣಿಕ ಅರ್ಹತೆಗಳು ನಿಜವೇ. ಎಂಎಸ್‌ಸಿ, ಎಂಎ, ಎರಡು ಪಿಎಚ್‌ಡಿ. ಈ ಎಲ್ಲ ಅರ್ಹತೆಗಳನ್ನು ಆತ ಸಾಬೀತುಪಡಿಸಿದರೆ ನಾವು ಬ್ಲಾಗಿಂಗ್ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಈ ಸವಾಲನ್ನು ನರೇಂದ್ರ ಶರ್ಮ ಸ್ವೀಕರಿಸುತ್ತಾರೆಯೇ?

ನಮ್ಮ ಹೋರಾಟ ಅರ್ಧಕ್ಕೆ ನಿಂತಿದೆ. ಸದ್ಯಕ್ಕಂತೂ ಮೂಗು ಹಿಡಿದು ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನರೇಂದ್ರ ಶರ್ಮ ತನ್ನ ಕಾರ್ಯಕ್ರಮದಲ್ಲಿ ಈ ಮೊದಲಿನಂತೆ ಮಾತನಾಡುತ್ತಿಲ್ಲ. ಮೇ.೬ನೇ ತಾರೀಕು ಜಗನ್ಮಾತೆ ಬರುತ್ತಾಳೆ. ನಾನೇ ಸ್ವಾಗತಿಸುತ್ತಿದ್ದೇನೆ ಎನ್ನುತ್ತಿದ್ದ ಶರ್ಮ ಆ ಬಗ್ಗೆ ಬಾಯಿಬಿಡುತ್ತಿಲ್ಲ. ಜಗನ್ಮಾತೆಯ ಫ್ಲೈಟ್ ಏನಾದ್ರು ಮಿಸ್ ಆಯ್ತಾ, ಗೊತ್ತಿಲ್ಲ. ಇತ್ತೀಚಿಗೆ ಪ್ರಳಯದ ಪ್ರಸ್ತಾಪವೂ ನಿಂತಿದೆ. ಬಾಯಿಬಡುಕತನವನ್ನು ಕಡಿಮೆ ಮಾಡಿ ಎಂದು ಜೀ ಟಿವಿಯವರು ತಾಕೀತು ಮಾಡಿರಬಹುದು.

ಇಷ್ಟು ಬದಲಾವಣೆಗೆ ಕ್ರಿಯಾಶೀಲ ಅಂತರ್ಜಾಲಿಗರು ಕಾರಣವಾಗಿರುವುದು ಒಂದು ಹೆಮ್ಮೆ. ಇದರಲ್ಲಿ ಸಂಪಾದಕೀಯದ ಪಾಲು ತೀರಾ ಕಡಿಮೆ. ಜೀವಪರವಾಗಿ ಯೋಚಿಸುವ ಸಾವಿರಾರು ಮನಸ್ಸುಗಳಿಗೆ ಒಂದು ವೇದಿಕೆಯಾಗಿ ನಾವಿದ್ದೇವಷ್ಟೆ. ಈ ಎಲ್ಲ ಮನಸ್ಸುಗಳಿಗೂ ಅಭಿನಂದನೆಗಳು, ಕೃತಜ್ಞತೆಗಳು.

ಹಾಗಂತ ಈ ಅಭಿಯಾನವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಹೊಣೆಗಾರಿಕೆಯನ್ನು ನಾವು ಮರೆತಿಲ್ಲ. ಬಹುಶಃ ಇನ್ನಷ್ಟು ದೀರ್ಘವಾಗಬಹುದಾದ ಈ ಆಂದೋಲನದಲ್ಲಿ ನೀವು ಸದಾ ನಮ್ಮ ಜತೆಗಿರುತ್ತೀರಿ ಎಂಬ ನಂಬುಗೆ ಇದೆ.

ಇವತ್ತು ಮಧ್ಯಾಹ್ನ ೨-೩೦ಕ್ಕೆ ಬದುಕು ಜಟಕಾ ಬಂಡಿಯ ಮರುಪ್ರಸಾರ ಇದೆ. ನಿನ್ನೆ ನೋಡದೇ ಇರುವವರು ತಪ್ಪದೆ ನೋಡಿ, ನಿಮಗೇನನ್ನಿಸಿತು ಹೇಳಿ.
0 komentar

Blog Archive