ವಿಆರ್‌ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರರು ಆರಂಭಿಸಲಿರುವ ಹೊಸ ದಿನಪತ್ರಿಕೆಗೆ ತಿಂಗಳುಗಣನೆ ಆರಂಭವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು  ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಈಶ್ವರ ದೈತೋಟ ಅವರು ಹಿಂದೆ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ, ಉದಯವಾಣಿ.. ಹೀಗೆ ಒಂದಾದ ಮೇಲೊಂದರಂತೆ ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದವರು. ಹಿರಿಯ ಪತ್ರಕರ್ತ ಮಹದೇವಪ್ಪ ಅವರೊಂದಿಗೆ ಸೇರಿ ಆರಂಭದ ದಿನಗಳಲ್ಲಿ ವಿಜಯ ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ್ದವರು. ಸಂಕೇಶ್ವರರ ಹೊಸ ಪತ್ರಿಕೆಗೆ ಅವರು ಸಂಪಾದಕರಾಗುತ್ತಾರಾ? ಕಾದು ನೋಡಬೇಕು.

ಇನ್ನು ಈ ಹೊಸ ಪತ್ರಿಕೆಗೆ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಸಲುವಾಗಿ ಪತ್ರಕರ್ತರನ್ನು ಗುರುತಿಸುವ ಕೆಲಸ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಉದಯವಾಣಿ, ವಿಜಯ ಕರ್ನಾಟಕ ಹಾಗು ಕನ್ನಡಪ್ರಭ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆದ ಬದಲಾವಣೆಗಳಿಂದ ಇರಿಸುಮುರಿಸಿಗೆ ಒಳಗಾದ ಹಲವರು ಸಂಕೇಶ್ವರರ ಕಡೆ ವಾಲಬಹುದು.

ಸಂಕೇಶ್ವರರು ಏನನ್ನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಮಾಡುವವರು. ಪತ್ರಿಕೆ ಆರಂಭಿಸುವಾಗಲೇ ಹಲವು ಆವೃತ್ತಿಗಳೊಂದಿಗೇ ನುಗ್ಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅವರಿಗೆ ಹೆಚ್ಚು ಸಿಬ್ಬಂದಿಯೂ ಬೇಕಾಗಬಹುದು. ಹೀಗಾಗಿ ಪತ್ರಕರ್ತರಿಗೆ ಮತ್ತೆ ಅವಕಾಶಗಳು ಒದಗಿ ಬಂದಂತಾಗಿದೆ.

ಕನ್ನಡದಲ್ಲಿ ಹೊಸ ದಿನಪತ್ರಿಕೆಯ ಪ್ರಯೋಗವನ್ನು ಮಾಡಲು ಎಲ್ಲರೂ ಅಂಜುತ್ತಾರೆ. ವಿಜಯ ಕರ್ನಾಟಕ ಹೊರತು ಪಡಿಸಿ ಹೊಸ ಪತ್ರಿಕೆಯ ಪ್ರಯೋಗ ಯಶಸ್ವಿಯಾದ ಉದಾಹರಣೆಗಳೂ ಸಹ ಇಲ್ಲ. ಹೀಗಿರುವಾಗ ಸಂಕೇಶ್ವರರ ಹೊಸ ಪತ್ರಿಕೆ ಹೇಗಿರುತ್ತದೆ? ಯಾವ ಮಟ್ಟದ ಪೈಪೋಟಿ ನೀಡುತ್ತದೆ? ಮತ್ತೊಂದು ಸುತ್ತಿನ ಬೆಲೆ ಸಮರ ಕನ್ನಡ ಪತ್ರಿಕಾರಂಗದಲ್ಲಿ ಶುರುವಾಗಬಹುದಾ?

ಕುತೂಹಲಗಳು ಸಾಕಷ್ಟಿವೆ. ನೋಡ್ತಾ ಇರೋಣ, ಏನೇನ್ ಆಗುತ್ತೆ ಅಂತ.

ಇದಿಷ್ಟು ಸಂಕೇಶ್ವರರ ಹೊಸ ಪತ್ರಿಕೆಯ ಕಥೆಯಾಯಿತು. ಸುವರ್ಣ ನ್ಯೂಸ್‌ನಿಂದ ತೆರೆಮರೆಗೆ ಸರಿದ ನಂತರ ಎಚ್.ಆರ್.ರಂಗನಾಥ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರದ್ದು. ನಮಗೂ ಸಹ ಈ ಕುತೂಹಲ ಇದ್ದೇ ಇದೆ. ರಂಗನಾಥ್ ಅವರು ವಾಪಾಸು ಬರಲಿದ್ದಾರೆ, ಹೊಸ ಚಾನಲ್‌ನೊಂದಿಗೆ ಹಿಂದಿರುಗಲಿದ್ದಾರೆ. ಇದು ಸದ್ಯಕ್ಕೆ ನಮಗೆ ಗೊತ್ತಾಗಿರುವ ಅಪೂರ್ಣ ಮಾಹಿತಿ. ಹೇಗೆ, ಏನು ಎಂಬುದನ್ನು ಟ್ರಾಕ್ ಮಾಡುತ್ತಿರುತ್ತೇವೆ. ಗೊತ್ತಾದ ಕೂಡಲೇ ಹೇಳುತ್ತೇವೆ.

ಕೊನೆ ಕುಟುಕು: ಆದಿಕವಿ ಪಂಪ ಹೇಗೆ ಕವಿ ಮತ್ತು ಕಲಿ ಎರಡೂ ಆಗಿದ್ದನೋ ಹಾಗೆಯೇ ನಮ್ಮ ಡಿ.ಸಿ.ರಾಜಪ್ಪನವರು ಲಾಠಿ ಹಿಡಿದು ಸಮಾಜವನ್ನು ತಿದ್ದುತ್ತಾರೆ, ಲೇಖನಿ ಹಿಡಿದು ಸರಿ ದಾರಿಗೆ ತರುತ್ತಾರೆ.... ಹೀಗೆ ವಿಜಾಪುರ ರಕ್ಷಣಾಧಿಕಾರಿ ಡಿ.ಸಿ.ರಾಜಪ್ಪನವರನ್ನು ವಾಚಾಮಗೋಚರವಾಗಿ ಹೊಗಳಿದವರು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್. ವಿಜಾಪುರ ವೈಭವ ಎಂಬ ಸ್ಮರಣ ಸಂಚಿಕೆಯ ಬೆನ್ನುಡಿಯಲ್ಲಿ ಅವರು ಹೀಗೆ ಬರೆದಿದ್ದಾರೆ. ಅಭಿನವ ಪಂಪನನ್ನು ಹುಡುಕಿದ್ದಾಯಿತು. ಇನ್ನು ಅಭಿನವ ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ ಇತ್ಯಾದಿಗಳನ್ನು ಹುಡುಕಿಕೊಡುವ ಹೊಣೆಯೂ ಜಿ.ಎನ್.ಮೋಹನ್‌ರದ್ದು.
0 komentar

Blog Archive