ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಹತ್ಯೆಯ ಚರ್ಚೆಯ ನಡುವೆಯೇ ಮರೆತುಹೋಗಬಹುದಾದ ವಿಷಯಗಳ ಕುರಿತು ಪತ್ರಕರ್ತ ಪರಶುರಾಮ್ ಕಲಾಲ್ ಈ ಲೇಖನ ಬರೆದಿದ್ದಾರೆ. ಹೊಸಪೇಟೆಯವರಾದ ಕಲಾಲ್ ಸಾಮಾಜಿಕ ಅಸಮಾನತೆಗಳ ವಿರುದ್ಧ ನಿರಂತರ ಹೋರಾಡಿಕೊಂಡರು ಬಂದವರು.-ಸಂ

ಪರಶುರಾಮ್ ಕಲಾಲ್
ಬಿನ್ ಲಾಡೆನ್ ಹತ್ಯೆಯ ಸುದ್ದಿಯನ್ನು ಎಲ್ಲಾ ಪತ್ರಿಕೆಗಳು ತನಿಖಾ ವರದಿ ರೀತಿ ಲಂಬಿಸಿ ಬರೆದಿವೆ. ಟಿ.ವಿ. ಸುದ್ದಿ ಮಾಧ್ಯಮಗಳಂತೂ ಪತ್ತೆದಾರಿ ಕಥೆಯನ್ನಾಗಿ ಲಂಬಿಸಿ ಎಳೆದು ಹಾಕಿವೆ. ಭಯೋತ್ಪಾದಕನ ಅಂತ್ಯ ಹೇಗಾಯಿತು ಎನ್ನುವದರಿಂದ ಹಿಡಿದು ಪಾಕಿಸ್ತಾನದ ಪಾತ್ರದವರೆಗೆ, ಅಮೆರಿಕಾದ ಸಿಐಎ ಯೋಜಿತ ತನಿಖೆಯ ಕುರಿತು ಸಿಐಡಿ ಧಾರವಾಹಿಯನ್ನಾಗಿಸಿ ಬಿಟ್ಟಿವೆ. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಮರೆಯಾಗಿವೆ ಅಥವಾ ಮಸುಕಾಗಿ ಬಿಟ್ಟಿವೆ.

ಯಾರು ಭಯೋತ್ಪಾದಕರು? ಅಮೆರಿಕಾ ಹೇಳಿದ ಮೇಲೆಯೇ ನಾವು ಅವರನ್ನು ಭಯೋತ್ಪಾದಕ ಅನ್ನಬೇಕಾ? ಅಸಲಿ ಈ ಬಿನ್ ಲಾಡೆನ್ ಒಬ್ಬ ಭಯೋತ್ಪಾದಕನಾಗಿ ರೂಪಗೊಂಡಿದ್ದು ಹೇಗೆ? ಹೀಗೆ ರೂಪಿಸಿದವರು ಯಾರು? ಇದನ್ನು ಒಂದಿಷ್ಟು ಪರಿಶೀಲನೆ ಮಾಡುವುದು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳ ಕರ್ತವ್ಯವಾಗಿತ್ತು. ಅದನ್ನು ಅವುಗಳು ಅಷ್ಟು ಸರಿಯಾಗಿ ಪಾಲಿಸಿಲ್ಲ ಎನ್ನುವುದೇ ಈ ಬರಹದ ಹಿಂದಿರುವ ವಿಷಾದವಾಗಿದೆ.

ಸೋವಿಯತ್ ಒಕ್ಕೂಟ ಅಖಂಡವಾಗಿದ್ದಾಗ ಅಲ್ಲಿಯ ಚೆಚೆನ್ಯ ಪ್ರಾಂತದಲ್ಲಿ ಭಯೋತ್ಪಾದನೆ ನಡೆಸಲು ಅಮೆರಿಕಾ ರೂಪಿಸಿದ ವ್ಯಕ್ತಿಯೇ ಈ ಬಿನ್ ಲಾಡೆನ್ ಆಗಿದ್ದ. ಅಪಘಾನಿಸ್ತಾನದಲ್ಲಿ ಸೊವಿಯತ್ ದೇಶದ ಸೈನ್ಯವನ್ನು ಹಿಂದಕ್ಕೆ ಕಳಿಸಲು ತಾಲಿಬಾನಿಗಳಿಗೆ ಆಪಾರ ಪ್ರಮಾಣದ ಶಸ್ತ್ರಾಗಳನ್ನು ಹಾಗೂ ಹಣವನ್ನು ಸಹಾಯ ಮಾಡಿದ ಅಮೆರಿಕಾ ಇದೇ ಬಿನ್‌ಲಾಡೆನ್ ಹಾಗೂ ತಾಲಿಬಾನಿಗಳನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿತ್ತು. ಬಹಿರಂಗವಾಗಿಯೇ ಇವರನ್ನು ಬೆಂಬಲಿಸಿತ್ತು. ಇರಾನ್-ಇರಾಕ್ ನಡುವಿನ ೧೩ ವರ್ಷಗಳ ಯುದ್ಧದಲ್ಲಿ ಸದ್ದಾಂ ಹುಸೇನ್ ಅವರನ್ನು ಸಹ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿತ್ತು. ಯಾವಾಗ ಸದ್ದಾಂ ಹುಸೇನ್ ಅಮೆರಿಕಾದ ವಿರುದ್ಧ ಸೆಣೆಸುತ್ತಾ ಯುರೋ ಕರೆನ್ಸಿ ಮೂಲಕ ತೈಲ ಮಾರಾಟಕ್ಕೆ ಮನಸ್ಸು ಮಾಡಿದೊಡನೆ ಭಯೋತ್ಪಾದಕನಾಗಿ ಬಿಟ್ಟ. ಆತನ ರಾಷ್ಟ್ರದಲ್ಲಿ ಪರಮಾಣು ಬಾಂಬ್‌ಗಳಿವೆ ಎಂದು ಅಲ್ಲಿ ಯುದ್ಧ ನಡೆಸಿದ ಅಮೆರಿಕಕ್ಕೆ ಇರಾಕ್‌ನಲ್ಲಿ ಯಾವ ಬಾಂಬ್ ಕಾಣಿಸಲಿಲ್ಲ. ಅದರ ಬದಲು ತೈಲ ಗಣಿಗಳೆಲ್ಲಾ ಅಮೆರಿಕಾ ತೈಲ ಕಂಪನಿಗಳು ವಶ ಪಡೆಸಿಕೊಳ್ಳಲು ಸಾಧ್ಯವಾಯಿತು. ಇವತ್ತಿಗೂ ಇರಾಕ್ ಬಿಟ್ಟು ಅಮೆರಿಕಾ ಸೈನ್ಯ ಹೊರಗೆ ಹೋಗಿಲ್ಲ. ಈ ಯುದ್ಧದಲ್ಲಿ ೧೫ ಲಕ್ಷ ಜನರು ಹತರಾಗಿದ್ದಾರೆ. ಈ ಭಯೋತ್ಪಾದನೆಗೆ ಏನನ್ನಬೇಕು?

ಜಗತ್ತಿನ ಸಾರ್ವಭೌಮನೆಂದು ಭಾವಿಸಿಕೊಂಡಿರುವ ಅಮೆರಿಕಾದ ಮುಖ್ಯ ಗುರಿ ಲಾಭಬಡುಕತನ. ಯುದ್ಧ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಕಂಪನಿಗಳು ಹಾಗೂ ತೈಲ ಕಂಪನಿಗಳ ಲಾಭಕೋರತನಕ್ಕೆ ಪೂರಕವಾಗಿಯೇ ಅಮೆರಿಕದ ನೀತಿಗಳು ರೂಪುಗೊಂಡಿವೆ. ಪಾಕಿಸ್ತಾನ ಹಾಗೂ ಭಾರತಗಳ ನಡುವೆ ವೈರತ್ವ ಕಡಿಮೆಯಾಗದಂತೆ ನೋಡಿಕೊಂಡ ದೇಶ ಅಮೆರಿಕ. ಅಮೇರಿಕಾದವರೇ ಆದ ನೋಮ್ ಚೋಮಸ್ಕಿ ಹೇಳುವ ಪ್ರಕಾರವೇ ಅಮೆರಿಕಾ ದೇಶವು ಜಗತ್ತಿನ ದೊಡ್ಡ ಭಯೋತ್ಪಾದಕ ರಾಷ್ಟ್ರ. ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ಇದನ್ನು ನಾವು ಮರೆಯಬಾರದು. ದಕ್ಷಿಣ ಆಫ್ರಿಕಾದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದ ನೆಲ್ಸನ್ ಮಾಂಡೆಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು ಇದೇ ಅಮೆರಿಕಾ. ನಂತರ ರಾಗ ಬದಲಿಸಿತು.

ಜಗತ್ತಿನ ೧೩೫ ರಾಷ್ಟ್ರಗಳಲ್ಲಿ ೧೭೫ಕ್ಕೂ ಅಧಿಕ ಸೈನಿಕ ನೆಲೆಗಳನ್ನು ಅಮೆರಿಕಾ ಹೊಂದಿದೆ. ಮಧ್ಯ ಏಷಿಯಾದಲ್ಲಿ ಚೀನಾ, ಭಾರತ, ಪಾಕಿಸ್ತಾನ, ಬರ್ಮಾ ಇತರೆ ರಾಷ್ಟ್ರಗಳನ್ನು ನಿಯಂತ್ರಣದಲ್ಲಿಡಲು ಈ ಭಾಗದಲ್ಲಿ ಸೈನಿಕ ನೆಲೆಯನ್ನು ಹೊಂದಲು ಅದು ನಡೆಸಿರುವ ಪ್ರಯತ್ನಕ್ಕೂ ದೊಡ್ಡ ಇತಿಹಾಸವೇ ಇದೆ. ಅದರ ಭಾಗವಾಗಿಯೇ ಇಂತಹ ಬೆಳವಣಿಗೆಗಳನ್ನು ಗಮನಿಸಬೇಕು. ಎಲ್ಲಾ ದೇಶಗಳ ಆಂತರಿಕ ವ್ಯವಸ್ಥೆಯಲ್ಲಿ ಕೈಯಾಡಿಸಿ, ತನ್ನ ಕೈ ಬೊಂಬೆ ಸರ್ಕಾರಗಳನ್ನು ಕುಳ್ಳ್ಳಿರಿಸುವ ಅದರ ಪ್ರಯತ್ನ, ಸಿಐಎ ಮೂಲಕ ನಡೆಸುವ ಕುತಂತ್ರ ಜಗಜ್ಜಾಹೀರವಾಗಿವೆ. ಭಾರತದಲ್ಲೂ ಬ್ರಹ್ಮಪುತ್ರ ಪ್ರಾಜೆಕ್ಟ್ ಅನ್ನು ಸಿಐಎ ರೂಪಿಸಿತ್ತು. ಈಶಾನ್ಯ ರಾಜ್ಯಗಳು ಸ್ವತಂತ್ರ್ಯ ರಾಷ್ಟ್ರಗಳೆಂದು ಘೋಷಿಸಿಕೊಳ್ಳಲು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ, ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಜಮ್ಮು ಕಾಶ್ಮೀರದಲ್ಲೂ ಇದೇ ಕೆಲಸ ಮಾಡಿತ್ತು ಈ ಬಗ್ಗೆ ಕೂಡಾ ನಾವು ಪರಿಶೀಲನೆ ನಡೆಸುವುದು ಇವತ್ತಿನ ಅಗತ್ಯವಾಗಿದೆ.

ಭಾರತ ದೇಶದಲ್ಲಿ ಏನೇ ಭೃಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿದ್ದರೂ ಇಲ್ಲಿ ಇನ್ನೂ ಪ್ರಜಾಪ್ರಭುತ್ವ ಉಸಿರಾಡುತ್ತಿದೆ. ಸ್ವಲ್ಪ ಉಬ್ಬಸರೋಗಕ್ಕೆ ತುತ್ತಾಗಿರಬಹುದು. ಆದರೆ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿಕೊಂಡು, ಪ್ರಜಾಪ್ರಭುತ್ವವನ್ನು ಸ್ಪಾನ್ಸರ್ ಮಾಡುತ್ತಿರುವ ಅಮೆರಿಕಾ ಭಯೋತ್ಪಾದನೆಯ ಬಗ್ಗೆ ದೊಡ್ಡ ಗಂಟಲಿನಿಂದ ಮಾತನಾಡದಿದ್ದರೆ ಅದರ ಬಾಯಿ ನಾವು ಆಗುವ ಅಪಾಯವಿದೆ.

ಅಮೆರಿಕಾದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆ ಇದೆ. ಅದು ಕಲ್ಲಾಗಿದೆ. ಪ್ರತಿಮೆಯಾಗಿದೆ. ತೋರಿಸಲಷ್ಟೇ ಇದೆ. ಭಾರತದಲ್ಲೂ ಇಂಥ ಸ್ಥಿತಿ ಬರಬಾರದಲ್ಲವೆ?
- ಪರಶುರಾಮ ಕಲಾಲ್ 
0 komentar

Blog Archive