ಬಹಳ ದಿನಗಳಾಯ್ತು, ಮೀಡಿಯಾ ಮನೆಗಳ ಅಪ್‌ಡೇಟ್ಸ್ ಹೇಳದೆ. ಸಾಕಷ್ಟು ವಿದ್ಯಮಾನಗಳು ನಡೆದಿವೆ. ಮೊದಲನೆಯದು ಪ್ರಜಾವಾಣಿಯಲ್ಲಿ ಆಗಿರುವ ಬದಲಾವಣೆ. ಗೋಪಾಲ ಹೆಗಡೆಯವರು ಮೇ.೧ರಂದು ಪ್ರಜಾವಾಣಿಯ ಸಹ ಸಂಪಾದಕ (ಅಸೋಸಿಯೇಟಿವ್ ಎಡಿಟರ್) ಸ್ಥಾನಕ್ಕೇರಿದ್ದಾರೆ. ಪ್ರಜಾವಾಣಿಯಲ್ಲಿ ಈ ಸ್ಥಾನವೇ ಮುಖ್ಯ. ಸಂಪಾದಕ ಕೆ.ಎನ್.ಶಾಂತಕುಮಾರ್ ಅವರ ನಂತರ ಪತ್ರಿಕೆಯ ನೀತಿ ನಿರೂಪಣೆಯ ಜವಾಬ್ದಾರಿ ಇರುವ ಹುದ್ದೆಯಿದು. ಇದುವರೆಗೆ ಆ ಸ್ಥಾನದಲ್ಲಿದ್ದವರು ಪದ್ಮರಾಜ ದಂಡಾವತಿ. ಈಗ ಅವರು ಕಾರ‍್ಯನಿರ್ವಾಹಕ ಸಂಪಾದಕರ ಸ್ಥಾನಕ್ಕೆ ಏರಿದ್ದಾರೆ. ಸಹ ಸಂಪಾದಕರಾದವರು ಬದಲಾದಾಗ ಅವರ ಸೇವಾವಧಿಯಿನ್ನೂ ಬಾಕಿ ಇದ್ದರೆ ಈ ಸ್ಥಾನ ನೀಡಲಾಗುತ್ತದೆ. ಅದು ಆಡಳಿತಕ್ಕೆ ಸಂಬಂಧಿಸಿದ ಹುದ್ದೆ.

ಗೋಪಾಲ ಹೆಗಡೆ
ಗೋಪಾಲ ಹೆಗಡೆಯವರು ಈ ಹುದ್ದೆಗೆ ಬರುವ ವಿಷಯವನ್ನು ಸೂಕ್ಷ್ಮವಾಗಿ ಹಿಂದೆಯೇ ನಾವು ಬರೆದಿದ್ದೆವು. ಗೋಪಾಲ ಹೆಗಡೆ ಕ್ರೀಡಾ ವರದಿಗಾರರಾಗಿ ಹೆಸರು ಮಾಡಿದವರು. ಟಿವಿಗಳು ಇಲ್ಲದ ಕಾಲದಲ್ಲಿ ಕ್ರಿಕೆಟ್ ಇತ್ಯಾದಿ ಕ್ರೀಡೆಗಳು ನಡೆಯುವ ಜಾಗಕ್ಕೆ ಹೋಗಿ ವರದಿ ಮಾಡಿದವರು. ಆ ಕಾಲಕ್ಕೆ ನಂ.೧ ಕ್ರೀಡಾ ವರದಿಗಾರೆಂದು ಹೆಸರಾದವರು ಹೆಗಡೆ. ಈಗ ಹೊಸ ಹುದ್ದೆ ಏರುವುದಕ್ಕೂ ಮುನ್ನ ಅವರು ಹುಬ್ಬಳ್ಳಿಯಲ್ಲಿದ್ದರು, ಸ್ಥಾನಿಕ ಸಂಪಾದಕರಾಗಿ.

ಗೋಪಾಲ ಹೆಗಡೆಯವರಿಗೆ ಇನ್ನು ಎರಡು ವರ್ಷ ಸೇವಾವಧಿ ಇರಬಹುದು. ಬಹುತೇಕ ಅಲ್ಲಿಯವರೆಗೆ ಅವರು ಪ್ರಜಾವಾಣಿಯ ಈ ಪ್ರತಿಷ್ಠಿತ ಹುದ್ದೆಯಲ್ಲಿರುತ್ತಾರೆ. ಪ್ರಜಾವಾಣಿಯ ವೈಚಾರಿಕ ಪರಂಪರೆಯನ್ನು, ಜನಪರ ಕಾಳಜಿಗಳನ್ನು, ನೊಂದವರ-ಬಡವರ ಪರವಾದ ನಿಲುವುಗಳನ್ನು ಗೋಪಾಲ ಹೆಗಡೆಯವರು ಕಾದಿಟ್ಟುಕೊಂಡು ಹೋಗಲಿ ಎಂದು ಹಾರೈಸೋಣ.

ಈಗ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿ ಎಂ.ನಾಗರಾಜು ನೇಮಕಗೊಂಡಿದ್ದಾರೆ. ನಾಗರಾಜು ಪ್ರಜಾವಾಣಿಯ ಮುಖ್ಯವರದಿಗಾರರಾಗಿಯೂ ಕೆಲಸ ಮಾಡಿದ್ದರು. ಹಲವು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ. ಬೆಂಗಳೂರನ್ನು ಬಿಟ್ಟರೆ ಪ್ರಜಾವಾಣಿಗೆ ಹುಬ್ಬಳ್ಳಿ ಬಹುಮುಖ್ಯ ಕೇಂದ್ರ. ಹೊಸ ಸವಾಲನ್ನು ಅವರು ಸುಲಭವಾಗಿ ನಿರ್ವಹಿಸುವ ವಿಶ್ವಾಸ ಅವರನ್ನು ಬಲ್ಲವರಿಗೆ ಇದೆ.
ಕೆ.ವಿ.ಪ್ರಭಾಕರ್

ಕನ್ನಡಪ್ರಭದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಕೆಲದಿನಗಳ ಹಿಂದೆ ಮುಖ್ಯ ವರದಿಗಾರರಾಗಿ ಕೆ.ವಿ.ಪ್ರಭಾಕರ್ ನೇಮಕಗೊಂಡಿದ್ದಾರೆ. ಪ್ರಭಾಕರ್ ಪ್ರತಿಭಾವಂತರು. ರಾಜಕೀಯ ವರದಿಗಾರಿಕೆಯಲ್ಲಿ ಅನುಭವವುಳ್ಳವರು. ಈ ಹುದ್ದೆಗೆ ಸಮರ್ಥರು.

ಈ ಹುದ್ದೆಯಲ್ಲಿದ್ದ ರೇಣುಕಾ ಪ್ರಸಾದ್ ಹಾಡ್ಯ ಅವರನ್ನು ದಿಲ್ಲಿ ವರದಿಗಾರರನ್ನಾಗಿ ನೇಮಿಸುತ್ತಿರುವ ಕುರಿತು ಮಾಹಿತಿಯಿದೆ. ಪ್ರತಿ ಪತ್ರಕರ್ತನೂ ಪ್ರತಿಷ್ಠಿತ ಪತ್ರಿಕೆಗಳ ದಿಲ್ಲಿ ವರದಿಗಾರರಾಗಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಾರೆ. ಹಾಡ್ಯ ಅವರಿಗೆ ಇದು ಒದಗಿ ಬಂದಿದೆ. ಆ ಸಾಮರ್ಥ್ಯವೂ ಅವರಿಗಿದೆ. ಅವರ ಪತ್ನಿಯೂ ಪತ್ರಕರ್ತೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ದಿಲ್ಲಿಗೆ ಹೋಗುತ್ತಾರೋ ಇಲ್ಲವೋ ಎಂಬ ಅನುಮಾನವಿದೆ.

ಹೊಸ ಹುದ್ದೆಗಳಿಗೆ ಹೋಗುತ್ತಿರುವ ಎಲ್ಲರಿಗೂ ಶುಭಾಶಯಗಳು. ಅವರಿಂತ ಕನ್ನಡ ಮಾಧ್ಯಮಲೋಕಕ್ಕೆ ಒಳ್ಳೆಯದಾಗಲಿ ಎಂಬ ಆಶಯ ಎಲ್ಲರದು.

ರವಿ ಬೆಳಗೆರೆ
ಜನಶ್ರೀ ಚಾನಲ್‌ನಲ್ಲಿ ಇತ್ತೀಚಿಗೆ ರವಿ ಬೆಳಗೆರೆ ಕಾಣಿಸಿಕೊಳ್ಳುತ್ತಿಲ್ಲ, ಕಾರಣ ನಿಗೂಢ. ಬದಲಾಗಿ ಮೊನ್ನೆ ಅವರು ಸುವರ್ಣ ನ್ಯೂಸ್‌ನಲ್ಲಿ ಬರೋಬ್ಬರಿ ಮೂರು ಗಂಟೆ ಲಾಡೆನ್ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಹಲವರ ಹುಬ್ಬೇರಿಸಿದೆ. ಜನಶ್ರೀಗೆ ಸುವರ್ಣ ನ್ಯೂಸ್ ಎದುರಾಳಿ ಚಾನಲ್. ಹೀಗಿರುವಾಗ ಬೆಳಗೆರೆ ಸುವರ್ಣದಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಲವರದು. ಜನಶ್ರೀಗಾಗಿ ರವಿ ಬೆಳಗೆರೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿಕೊಡುತ್ತಾರೆ ಎಂಬ ಮಾತಿತ್ತು. ಸ್ವತಃ ಬೆಳಗೆರೆಯವರೇ ಹಾಗೆ ಹೇಳಿಕೊಂಡಿದ್ದರು. ಆದರೆ ಅಂಥ ಕಾರ್ಯಕ್ರಮಗಳೇನು ಕಾಣಿಸುತ್ತಿಲ್ಲ. ಬದಲಾಗಿ ಈಟಿವಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮವನ್ನು ಅವರು ತಯಾರು ಮಾಡಿಕೊಡುತ್ತಿರುವ ಮಾಹಿತಿ ಇದೆ.

ಎಚ್.ಆರ್.ರಂಗನಾಥ್ ತೆರೆಮರೆಗೆ ಸರಿದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ. ರಂಗನಾಥ್ ಅವರ ಬಾಡಿ ಲಾಂಗ್ವೇಜ್, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾತನಾಡುವ ಶೈಲಿ, ಅತಿಥಿಗಳಿಗೆ ಮಾತನಾಡಲು ಅವಕಾಶ ನೀಡದ ಜಿಗುಟುತನ ಇತ್ಯಾದಿಗಳ ಬಗ್ಗೆ ಏನೇ ಟೀಕೆಗಳಿದ್ದರೂ ಅವರು ನ್ಯೂಸ್ ಚಾನಲ್‌ಗೆ ಹೇಳಿ ಮಾಡಿಸಿದ ಪತ್ರಕರ್ತ. ತನ್ನ ಅನುಭವ ಮತ್ತು ಜ್ಞಾನವನ್ನು ಬಳಸಿಕೊಂಡು ಅವರು ತಮ್ಮದೇ ಆದ ವೀಕ್ಷಕರನ್ನು ಸೃಷ್ಟಿಸಿಕೊಂಡಿದ್ದರು. ಜನಸಾಮಾನ್ಯರಿಗೂ ಅರ್ಥವಾಗುವಂತೆ ರಾಜಕೀಯವೂ ಸೇರಿದಂತೆ ಎಲ್ಲ ವಿದ್ಯಮಾನಗಳನ್ನು ಬಿಡಿಸಿ ಹೇಳುವ ಶೈಲಿ ಅವರಿಗೆ ಕರಗತ. ಸಾಯಿಬಾಬಾ ಸಾವು, ಲಾಡೆನ್ ಹತ್ಯೆ ಸಂದರ್ಭದಲ್ಲಂತೂ ರಂಗನಾಥ್ ಯಾವುದಾದರೂ ಚಾನಲ್‌ನಲ್ಲಿ ಇರಬೇಕಿತ್ತು ಎಂದು ಬಹಳಷ್ಟು ಜನರಿಗೆ ಅನ್ನಿಸಿದೆ. ರಂಗನಾಥ್ ನೇಪಥ್ಯಕ್ಕೆ ಸರಿದ ಮೇಲೆ ಸುವರ್ಣ ನ್ಯೂಸ್ ಟಿಆರ‍್ಪಿ ಸಹ ಜರ್ರನೆ ಇಳಿದುಹೋಗಿದೆ. ರಾಜೀವ್ ಚಂದ್ರಶೇಖರ್‌ಗೆ ಇದು ನಿಜಕ್ಕೂ ತಲೆನೋವಿನ ಸಂಗತಿ. ಸಮಯ ಟಿವಿ ಹೆಚ್ಚು ಕಡಿಮೆ ಸುವರ್ಣ ನ್ಯೂಸ್ ಹತ್ತಿರದಲ್ಲೇ ಇದೆ. ಜನಶ್ರೀ ಬಗ್ಗೆ ಹೇಳುವಂಥ ವಿಶೇಷವೇನೂ ಕಾಣುತ್ತಿಲ್ಲ. ಇನ್ನು ಟಿವಿ೯, ಟಿಆರ‍್ಪಿಯಲ್ಲಿ ಇತರ ಎಲ್ಲ ಚಾನಲ್‌ಗಳಿಗಿಂದ ಮೈಲು ದೂರ ಮುಂದೆ ಸಾಗಿದೆ. ಉಳಿದೆಲ್ಲ ಚಾನಲ್‌ಗಳ ಟಿಆರ್‌ಪಿಯನ್ನು ಒಟ್ಟುಗೂಡಿಸಿದರೂ ಟಿವಿ೯ಗೆ ಸಮವಾಗಲಾರದು. ಸದ್ಯದ ಮಟ್ಟಿಗೆ ಟಿವಿ೯ ಜತೆ ಫೈಟಿಂಗು ನಡೆಸಲು ಇತರ ಚಾನಲ್‌ಗಳು ಪವಾಡವನ್ನೇ ಮಾಡಬೇಕು, ಅಷ್ಟೆ.
ಎಚ್.ಆರ್.ರಂಗನಾಥ್

ಕೊನೆ ಮಾತು...
ಕಳೆದ ನಾಲ್ಕೂವರೆ ತಿಂಗಳಿನಿಂದ ಸತತವಾಗಿ ಈ ಬ್ಲಾಗ್‌ನಲ್ಲಿ ಬರೆದು ನಮಗೂ ಕೊಂಚ ಸುಸ್ತು, ಬಳಲಿಕೆ. ಈ ಬ್ಲಾಗ್ ಅನ್ನು ಕಮೆಂಟುಗಳ ಸಮೇತ ಪುಸ್ತಕರೂಪದಲ್ಲಿ ತಂದರೆ ಕನಿಷ್ಠ ೧೦೦೦ ಪುಟಗಳ ಪುಸ್ತಕವಾಗಿಬಿಡುತ್ತದೆ. ಹಿಂದಿರುಗಿ ನೋಡಿದಾಗ ಅಷ್ಟೊಂದು ಬರೆದೆವಾ ಅನ್ನಿಸುವುದುಂಟು. ಸ್ವಲ್ಪ ದಿನಗಳ ಬಿಡುವು ಬೇಕೆನ್ನಿಸಿದೆ. ಈ ಬ್ಲಾಗ್‌ನಿಂದಾಗಿಯೇ ತಗುಲಿಕೊಂಡ ಕೆಲವು ಅತ್ಯಂತ ಮಹತ್ವದ ಕೆಲಸಗಳು ತುಂಬಾ ಸಮಯವನ್ನು ಬೇಡುತ್ತಿವೆ. ಹೀಗಾಗಿ ಕೆಲ ದಿನಗಳ ವಿಶ್ರಾಂತಿ. ಮರೆತುಬಿಡಬೇಡಿ, ಹೀಗೆ ಹೋಗಿ ಹಾಗೆ ವಾಪಾಸು ಬಂದುಬಿಡುತ್ತೇವೆ. ಹಾಗಂತ ಬ್ಲಾಗ್ ಖಾಲಿ ಹೊಡೆಯುತ್ತದೆ ಎಂದುಕೊಳ್ಳಬೇಕಾಗಿಲ್ಲ, ಯಾರಾದೂ ಪ್ರಕಟಣೆಗೆ ಲೇಖನಗಳನ್ನು ಕಳುಹಿಸಿದರೆ, ಅದು ಈ ಬ್ಲಾಗ್ ಚೌಕಟ್ಟಿಗೆ ಒಗ್ಗುವಂತಿದ್ದರೆ ಪ್ರಕಟಿಸುತ್ತೇವೆ. ಪ್ರೀತಿ ಇರಲಿ.
0 komentar

Blog Archive