ಕನ್ನಡಪ್ರಭದ ಜೊತೆಗಿನ ಕರುಳಬಳ್ಳಿಯನ್ನು ಕಡೆಗೂ ಕಡಿದುಕೊಂಡಿದ್ದೇನೆ. ರಾಜೀನಾಮೆ ಅಂಗೀಕಾರ ಆಗಿದೆ.

ಮನಸ್ಸು ಭಾರ. ಒಳಗೇ ಸುಡುವ ದುಗುಡ.... ಇಪ್ಪತ್ತಾರು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ನನ್ನನ್ನು ನೆಲೆ ನಿಲ್ಲಿಸಿ ನೀರು ಗೊಬ್ಬರ ಎರೆದ ನನ್ನ ಕನ್ನಡಪ್ರಭ... ಮೈಸೂರು ವಿ.ವಿ.ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಮೊದಲ ವರ್ಷ ಇಂಟರ್ನ್‌ಶಿಪ್ ಮಾಡಲು ಬಂದಾಗಲೇ ವಿಶೇಷ ವರದಿಯನ್ನು ನನ್ನ ಕೈಯಿಂದ ಬರೆಯಿಸಿ ಮುಖಪುಟದಲ್ಲಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಉದ್ಯೋಗ ನೀಡ್ತೇವೆ ಬರ್ತೀಯಾ ಎಂದು ಕರೆದು ತಬ್ಬಿಕೊಂಡು ಸದಾ ಬೆನ್ನು ತಟ್ಟಿದ ಕನ್ನಡಪ್ರಭ... 

ಖಾದ್ರಿ ಶಾಮಣ್ಣ, ಕೆ.ಸತ್ಯನಾರಾಯಣ, ವೈಯೆನ್ಕೆ, ಅವರಿಂದ ಮೊದಲಾಗಿ ರಾಮಪ್ರಸಾದ್, ಗರುಡನಗಿರಿ ನಾಗರಾಜ, ಹಿರಿಯಣ್ಣ ಡಿ.ಮಹದೇವಪ್ಪ, ನಾಡಿಗೇರ ಶ್ರೀಕಾಂತ, ಪಟ್ಟಾಭಿರಾಮನ್, ಕಳಾವರ ನರಸಿಂಹಶೆಟ್ಟಿ, ಭಾಷ್ಯಂ ಸಂಪತ್ತಯ್ಯಂಗಾರ್, ಸಂಪಿಗೆ ಸುಬ್ಬಣ್ಣ, ಮೇನಕಾ ಆಫೀಸಿನಲ್ಲೊಂದು ಸುಪ್ರಭಾತದ ಚಪ್ಪಲ್ಲಿ ಸೀತಾರಾಂ, ಟಿ.ಜಿ.ಅಶ್ವತ್ಥನಾರಾಯಣ, ಮರಡಿಹಳ್ಳಿ ಶ್ರೀಧರಮೂರ್ತಿ ಶ್ರೀಹರ್ಷ, ಜಿ.ಎಸ್.ಸದಾಶಿವ, ಪಾರ್ಥಸಾರಥಿ, ಜಯರಾಮ ಅಡಿಗ, ಶಶಿಧರ ಭಟ್, ರವಿ ಬೆಳಗೆರೆ, ಪ.ಸ.ಕುಮಾರ್, ಎಚ್.ಆರ್.ರಂಗನಾಥ್, ರವಿ ಹೆಗಡೆ, ಶಿವಸುಬ್ರಹ್ಮಣ್ಯ, ಮಲ್ಲಿಕಾರ್ಜುನಯ್ಯ, ಮನೋಹರ ಯಡವಟ್ಟಿ, ಎಸ್ಕೆ ಶ್ಯಾಮಸುಂದರ್, ಉದಯ ಮರಕಿಣಿ, ಜೋಗಿ, ಸುಧಾಕರ ದರ್ಭೆ, ಶಿವಶಂಕರ್ ಅವರಿದ್ದ ಕನ್ನಡಪ್ರಭ....

ಕಾರ್ಡ್‌ಬೋರ್ಡ್ ಗೋಡೆಯ ಆ ಬದಿಯಲ್ಲಿ ವಿ.ಎನ್.ಸುಬ್ಬರಾವ್, ಇ.ರಾಘವನ್, ಟಿ.ಜೆ.ಎಸ್. ಜಾರ್ಜ್, ಕೆ.ಎಸ್. ಸಚ್ಚಿದಾನಂದಮೂರ್ತಿ, ಅರಕಲಗೂಡು ಸೂರ್ಯಪ್ರಕಾಶ್, ಇಂಟೂರಿ ಚಂದ್ರಮೌಳಿ, ಗಿರೀಶ್ ನಿಕಮ್, ಕೆ.ವಿ.ರಮೇಶ್, ರಾಮಕೃಷ್ಣ ಉಪಾಧ್ಯಾಯ, ನಚ್ಚಿ ಅರ್ಥಾತ್ ನರಸಿಂಹ ಚಕ್ರವರ್ತಿ, ಶ್ರೀನಿವಾಸ ಸಿರ್ನೂರ್ಕರ್, ಬಾಲು, ಮುಂತಾದ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯರು- ಸಂಗಾತಿಗಳ ಸಹವಾಸವನ್ನು ಕಟ್ಟಿ ಕೊಟ್ಟ ಕನ್ನಡಪ್ರಭ.... 

ದಿಲ್ಲಿಗೆ ಹರಸಿ ಕಳಿಸಿ ನನ್ನ ದಿಗಂತಗಳನ್ನು ವಿಸ್ತರಿಸಿದ ಕನ್ನಡಪ್ರಭ....ನೆರೆಯ ನಾಡಿನ ರಾಜಧಾನಿಯಲ್ಲಿ ಕನ್ನಡ ಛಾನೆಲ್‌ನ ಸುದ್ದಿ ವಿಭಾಗದ ಸೂತ್ರ ಹಿಡಿದು ಭ್ರಮ ನಿರಸನಗೊಂಡ ದಿನಗಳಲ್ಲಿ  ತಾಯಿಯಂತೆ ಕರೆದು ಮತ್ತೆ ಮಡಿಲಿಗಿರಿಸಿಕೊಂಡ ಕನ್ನಡಪ್ರಭ... ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳನ್ನು ಒದಗಿಸಿಕೊಟ್ಟು ಅವರಿಂದ ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡಪ್ರಭ.....

ಇಂತಪ್ಪ ಕನ್ನಡಪ್ರಭ ಇಂದು ಬದಲಾವಣೆಯ ಗಾಳಿಗೆ ಒಡ್ಡಿಕೊಂಡಿದೆ. ಅದರ ಜೀವಕೋಶಗಳ ಡಿಎನ್‌ಎ ವಿನ್ಯಾಸಕ್ಕೆ ಹೊಸ ರೂಪ. ಹೊಸ ಹೊರಳು. ಅಂಗಳದಲ್ಲಿ ಹರಿದ ಹೊಸ ನೀರು.. ಬೀಸಿದ ಹೊಸ ಗಾಳಿ....ಹೊತ್ತಿರುವ ಹೊಸ ಕಾವು ಬೆಳಕನ್ನೂ ನೀಡಲಿ. 

ನಾಡಿನ ಪತ್ರಿಕೋದ್ಯಮದ ಪ್ರಖರ ಸಾಕ್ಷಿಪ್ರಜ್ಞೆಯಿಂತಿರುವ ನಮ್ಮ ಹೆಮ್ಮೆಯ ಕೆ.ಸತ್ಯನಾರಾಯಣ ಇನ್ನೂ ಕನ್ನಡಪ್ರಭದಲ್ಲಿ ಬರೆಯುತ್ತಿದ್ದಾರೆ. ಹಳೆಯ ಕನ್ನಡಪ್ರಭದ ಅಳಿದುಳಿದ ಈ ಏಕೈಕ ಹೆಗ್ಗುರುತು ಇನ್ನೂ ಅಳಿಸಿಲ್ಲ. ಟಿ.ಜೆ.ಎಸ್. ಜಾರ್ಜ್ ಅವರ ಅಂಕಣಕ್ಕೆ ಹೊಸ ಹುಮ್ಮಸ್ಸಿನ ಡಿಸ್ಪ್ಲೇ  ಕೂಡ ಗಮನಾರ್ಹ. 

ಅಂದ ಹಾಗೆ ಬನ್ನಿ ಜೊತೆಗೆ ಕೆಲಸ ಮಾಡೋಣ ಎಂದು ಗೌರವಾನ್ವಿತ ಹಿರಿಯರೊಬ್ಬರು ದಿಲ್ಲಿಗೆ ಫೋನ್ ಮಾಡಿ ಕರೆದ ಹೊತ್ತಿನಲ್ಲಿ ಬದಲಾವಣೆಯ ಚಿತ್ರದ ರೂಪ ರೇಖೆಗಳು ನಿಚ್ಚಳ ಆಗಿರಲಿಲ್ಲ. ಹೀಗಾಗಿ ನಾನು ಹೊರಬಿದ್ದದ್ದು ಬದಲಾವಣೆ ವಿರುದ್ಧ ಎಂಬ ತಾಂತ್ರಿಕ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲ.

ನುರಿತ ಹಿರಿಯ ಕಸಬುದಾರ ಇ.ರಾಘವನ್ ಚುಕ್ಕಾಣಿ ಹಿಡಿದಿರುವ  ವಿಜಯ ಕರ್ನಾಟಕ ನನ್ನ ಸದ್ಯದ ಹೊಸ ನಾವೆ.

(ಇದು ಉಮಾಪತಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು. ನಿಷ್ಕಲ್ಮಶ ಮನಸ್ಸುಗಳಿಗೆ ಒಂದು ಸಂಸ್ಥೆಯೊಂದಿಗಿನ ಭಾವನಾತ್ಮಕ ನಂಟು ಹೇಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಉಮಾಪತಿಯವರು ತಮ್ಮ ಹೊಸ ನಾವೆಯ ಮೂಲಕ ಹೊಸ ಲೋಕವನ್ನು ನಮಗೆ ಪರಿಚಯಿಸುತ್ತ ಹೋಗಲಿ ಎಂದು ಆಶಿಸುತ್ತಾ, ಅವರಿಗೆ ಶುಭ ಕೋರುತ್ತೇವೆ.)
0 komentar

Blog Archive