ಹಮೀದ್ ಪಾಳ್ಯ ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇದುವರೆಗೆ ಈ ಜವಾಬ್ದಾರಿ ಹೊತ್ತಿದ್ದ ಎಚ್. ಆರ್ ರಂಗನಾಥ್ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆ ಹಲವು ದಿನಗಳಿಂದ ಗಾಳಿಯಲ್ಲಿತ್ತು. ಇದೀಗ ಸುದ್ದಿಯಾಗಿದೆ.

ಈ ಸುದ್ದಿ ಹಮೀದ್ ಹಾಗೂ ರಂಗನಾಥ್ ರವರ ವೃತ್ತಿಜೀವನದ ಬಹುಮುಖ್ಯ ಘಟ್ಟವನ್ನು ಸೂಚಿಸುತ್ತದೆ. ಹಿಂದೆ ರಂಗನಾಥ್ ಸುವರ್ಣ ಸೇರಿದಾಗ, ಅಂದಿನ ಮುಖ್ಯಸ್ಥ ಶಶಿಧರ ಭಟ್ ಸಂಪಾದಕೀಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಅದು ಕೆಲವೇ ಕಾಲದವರೆಗೆ. ಈಗ ಕಾಲ ಚಕ್ರ ಮತ್ತೊಂದು ಸುತ್ತು ಮುಗಿಸಿದೆ.ಇದು ಹಮೀದ್ ಕಾಲ.

ನೋ ಡೌಟ್ ಹಮೀದ್ ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಆಂಕರ್‌ಗಳಲ್ಲಿ ಒಬ್ಬರು. ಅವರನ್ನು ಪತ್ರಕರ್ತ ಎನ್ನುವುದಕಿಂತ, ಉತ್ತಮ ಆಂಕರ್ ಎಂದು ಗುರುತಿಸಿದ್ದೇ ಹೆಚ್ಚು. ಪತ್ರಕರ್ತನಾಗಿ, ಸುದ್ದಿ ಮುಖ್ಯಸ್ಥನಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ರಂಗನಾಥ್ ಅವರ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯೆಂದರೆ ಅವರು ಜುಗಲ್ ಬಂದಿ ಮತ್ತು ಪಬ್ಲಿಕ್ ವಾಯ್ಸ್ ಕಾರ್ಯಕ್ರಮಗಳನ್ನು ಮುಂದುವರೆಸಲಿದ್ದಾರೆ. ಎರಡೂ ಕಾರ್ಯಕ್ರಮಗಳು  ಸುವರ್ಣ ನ್ಯೂಸ್ ನಲ್ಲಿ ಜನಪ್ರಿಯವಾಗಿವೆ. ರಂಗನಾಥ್ ಇಲ್ಲದ ದಿನಗಳಲ್ಲಿ ಈ ಕಾರ್ಯಕ್ರಮಗಳು ಬೋರ್ ಹೊಡೆಸುತ್ತಿದ್ದವು. ಇತ್ತೀಚಿಗೆ ಜುಗಲ್ ಬಂದಿಯಲ್ಲಿ ರಂಗನಾಥ್ ಕಾಣಿಸಿಕೊಂಡಿದ್ದು ಕಡಿಮೆ. ಬೇರೆ ಯಾವುದೇ ಹೊಣೆಗಳು ಇಲ್ಲದೇ ಇರುವುದರಿಂದ ಇನ್ನು ಮುಂದೆ ಅವರು ಕಾಣಿಸಿಕೊಳ್ಳಬಹುದು.

ಇದೇನೇ ಇರಲಿ, ರಂಗನಾಥ್ ಇಷ್ಟು ಬೇಗ ಸುವರ್ಣ ನ್ಯೂಸ್‌ನ ಮುಖ್ಯಸ್ಥನ ಹುದ್ದೆಯಿಂದ ಹಿಂದೆ ಸರಿಯಬೇಕಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಸುವರ್ಣಕ್ಕೆ ಕನ್ನಡಪ್ರಭದಿಂದ ವಲಸೆ ಬಂದಾಗ ರಂಗನಾಥ್ ಅತ್ಯುತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು. ಅದುವರೆಗೆ ಟಿವಿ೯ಗೆ ಯಾವ ರೀತಿಯಲ್ಲೂ ಒಂದು ಸ್ಪರ್ಧೆ ಅನ್ನುವುದೇ ಇರಲಿಲ್ಲ. ರಂಗನಾಥ್ ವೃತ್ತಿಪರತೆ ಇಲ್ಲಿ ಕೆಲಸ ಮಾಡಿತು. ಸುವರ್ಣ ನ್ಯೂಸ್‌ಗೂ ವೀಕ್ಷಕರು ಹುಟ್ಟಿಕೊಂಡರು.

ಕಳೆದ ಆರೇಳು ತಿಂಗಳಿನಿಂದ ಕನ್ನಡ ಮಾಧ್ಯಮ ರಂಗದಲ್ಲಿ ವಿಪರೀತ ಬದಲಾವಣೆಗಳು ನಡೆದವು. ಸುವರ್ಣ ನ್ಯೂಸ್ ಪತ್ರಿಕೆ ಆರಂಭಿಸಿಬೇಕಿದ್ದ ರಾಜೀವ್ ಚಂದ್ರಶೇಖರ್, ಇದ್ದಕ್ಕಿದ್ದಂತೆ ಕನ್ನಡಪ್ರಭದ ಶೇರುಗಳನ್ನು ಕೊಂಡುಕೊಂಡರು. ಟೈಮ್ಸ್ ಸಂಸ್ಥೆಯಿಂದ ವಿಶ್ವೇಶ್ವರ ಭಟ್ ಹೊರಬಂದರು.  ಕನ್ನಡಪ್ರಭಕ್ಕೆ ಸಂಪಾದಕರೂ ಆದರು. ಸುವರ್ಣ ನ್ಯೂಸ್‌ನ ಸಂಪಾದಕರಾಗಬೇಕಿದ್ದ ರವಿ ಹೆಗಡೆ ಉದಯವಾಣಿಗೆ ಸಂಪಾದಕರಾದರು. ಕನ್ನಡಪ್ರಭ ಮತ್ತು ಉದಯವಾಣಿಗಳ ಸಂಪಾದಕರಾಗಿದ್ದ ಶಿವಸುಬ್ರಹ್ಮಣ್ಯ ಹಾಗು ತಿಮ್ಮಪ್ಪ ಹೆಗಡೆ ಉದ್ಯೋಗ ಕಳೆದುಕೊಂಡರು.

ಈಗ ರಂಗನಾಥ್ ಸರದಿ. ರಂಗನಾಥ್ ಅವರು ಕಸ್ತೂರಿ ನ್ಯೂಸ್ ಚಾನಲ್‌ಗೆ ಮುಖ್ಯಸ್ಥರಾಗಿ ಹೋಗುತ್ತಾರೆ ಎಂಬ ವದಂತಿಗಳಿದ್ದವು. ಆದರೆ ಅವರು ಸದ್ಯಕ್ಕೆ ಸುವರ್ಣದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮುಂದೆ ಏನೇನಾಗುತ್ತದೋ ಯಾರು ಬಲ್ಲರು?

ಹಮೀದ್ ಪಾಳ್ಯ ಅವರಿಗೆ ನಮ್ಮ ಶುಭಾಶಯಗಳು.

ಅಂದಹಾಗೆ, ಕನ್ನಡಪ್ರಭಕ್ಕೆ ಕೆ.ವಿ.ಪ್ರಭಾಕರ್ ಮತ್ತು ರಾಘವೇಂದ್ರ ಭಟ್ ಸೇರ್ಪಡೆಯಾಗಿದ್ದಾರೆ. ಇಬ್ಬರೂ ವಿಜಯ ಕರ್ನಾಟಕದಲ್ಲಿದ್ದರು. ಭಟ್ಟರ ಹಳೆಯ ಒಡನಾಡಿಗಳು. ಕೆ.ವಿ.ಪ್ರಭಾಕರ್ ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರೂ ಹೌದು. ಇಬ್ಬರೂ ಈಗ ವಿಕ ತೊರೆದು ಕಪ್ರ ಸೇರಿಕೊಂಡಿದ್ದಾರೆ.  ಈ ಸುದ್ದಿಯನ್ನು ವಿಶ್ವೇಶ್ವರ ಭಟ್ಟರು ತಮ್ಮ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.  ಅಲ್ಲಿಗೆ ಭಟ್ಟರೊಂದಿಗೆ ಜತೆಗೂಡಿದವರ ಸಂಖ್ಯೆ ಈಗ ಆರಕ್ಕೆ ಏರಿದೆ.
0 komentar

Blog Archive