Dude you are making allegations against a person but not addressing the issues raised by him. What's wrong in being pro-hindu? Even the mahatma said "I am proud to be a Hindu." Now would you say that a Hindu can't be secular? Secularism doesn't mean that you should not practice any religion, it means having tolerance towards the other religions. Would you say that no forced religion conversion is going on in the country? You have all problems with saffron band but you are dumb about others. In a secular country(?) there's a political party called Muslim League. When ML is not wrong why or how the others are wrong? Recently you media people made a huge cry against hindu terrorists but at the same time you are dumb about Afzal Guru. A terrorist is a terrorist. You(media) mention about hindu terrorists but when the terrorist belongs to someother religion you say that terrorists do not have any religion. Why such double standards?

                                                                                              - Ravi Sondur


ರವಿ ಸೊಂಡೂರ್ ಎಂಬುವವರು ಸಂಪಾದಕೀಯದ ಪೋಸ್ಟ್ ಒಂದಕ್ಕೆ ಫೇಸ್‌ಬುಕ್‌ನಲ್ಲಿ ನೀಡಿರುವ ಪ್ರತಿಕ್ರಿಯೆ ಇದು. ಇಂಥ ವಿಷಯಗಳಿಗೆ ಸಂಬಂಧಿಸಿದ ಕೆಲವು ಪ್ರತಿಕ್ರಿಯೆಗಳು ಓದುವುದಕ್ಕೂ ಅಸಹ್ಯವೆನಿಸುತ್ತದೆ, ಹೀಗಾಗಿ ಅವುಗಳಿಗೆ ಪ್ರತಿಕ್ರಿಯೆ ನೀಡಬೇಕೆನಿಸುವುದಿಲ್ಲ. ಆದರೆ ರವಿ ಸೊಂಡೂರ್ ಸಹನೀಯವಾದ ಭಾಷೆಯನ್ನು ಬಳಸಿದ್ದಾರೆ. ಹೀಗಾಗಿ ಅವರಿಗೆ ಉತ್ತರಿಸಬೇಕು ಅನ್ನಿಸಿದೆ.

ಡಾ.ಎಂ.ಚಿದಾನಂದ ಮೂರ್ತಿಯವರು ಇತ್ತೀಚಿಗೆ ಬರೆದ ಒಂದು ಓದುಗರ ಪತ್ರ ಹಾಗು ಪತ್ರಿಕಾಗೋಷ್ಠಿಯೊಂದರಲ್ಲಿ ಬಳಸಿದ ಭಾಷೆಯ ಕುರಿತಾಗಿ ಎರಡು ಪ್ರತ್ಯೇಕ ಪೋಸ್ಟ್‌ಗಳನ್ನು ಪ್ರಕಟಿಸಿದ್ದೆವು. ಈ ಎರಡರ ಕುರಿತಾಗಿ ಹಲವರಿಗೆ ಆಕ್ಷೇಪಣೆಗಳಿವೆ. ಬಹುಮುಖ್ಯವಾದ ಆಕ್ಷೇಪವೆಂದರೆ ಚಿದಾನಂದಮೂರ್ತಿಯವರು ಎತ್ತಿದ ಮತಾಂತರದ ಮೂಲ ಪ್ರಶ್ನೆಯನ್ನೇಕೆ ನೀವು ಚರ್ಚೆಯ ವಿಷಯವಾಗಿಸಿಲ್ಲ ಎಂಬುದು. ರವಿಯವರ ಆಕ್ಷೇಪವೂ ಅಲ್ಲಿಂದಲೇ ಶುರುವಾಗುತ್ತದೆ.

ಒಂದನ್ನು ಸ್ಪಷ್ಟಪಡಿಸಲೇಬೇಕು. ಮತಾಂತರದ ಕುರಿತ ಚರ್ಚೆ ನಮ್ಮ ಉದ್ದೇಶವಾಗಿರಲಿಲ್ಲ. ಚಿದಾನಂದ ಮೂರ್ತಿಯವರು ತಮ್ಮ ಓದುಗರ ಪತ್ರದಲ್ಲಿ ಒಂದು ಸಮುದಾಯದ ಕುರಿತಾಗಿ ಬಳಸಿದ ವಾಕ್ಯಗಳು ಗಾಬರಿ ಹುಟ್ಟಿಸುವಂತಿತ್ತು. ಇಂಥ ಜನಾಂಗೀಯ ದ್ವೇಷದ ಮಾತುಗಳನ್ನು ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಒಪ್ಪಲು ಸಾಧ್ಯವಿಲ್ಲ. ಇದಾದ ನಂತರ ಅವರು ಕ್ರಿಶ್ಚಿಯನ್ನರೇ ಕೋಮುವಾದಿಗಳು ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ ಮಾತನ್ನೂ ಸಹ ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ಮತಾಂತರ, ಗೋಹತ್ಯೆ ನಿಷೇಧದ ಕುರಿತು ಚಿದಾನಂದ ಮೂರ್ತಿಯವರಾಗಲಿ, ಈ ಕುರಿತು ಕಾಳಜಿ ಹೊಂದಿರುವ ಯಾವುದೇ ಸಂಘಟನೆ-ವ್ಯಕ್ತಿಗಳಾಗಲಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲು ಅವರು ಸ್ವತಂತ್ರರು. ಅದರಲ್ಲಿ ಎರಡು ಮಾತಿಲ್ಲ. ಪ್ರತಿಭಟನೆಗೆ ನಾನಾ ಬಗೆಯ ಮಾರ್ಗಗಳು ಇವೆ. ಆದರೆ ಇದೇ ನೆಪವನ್ನಿಟ್ಟುಕೊಂಡು ಮೂರನೇ ದರ್ಜೆಯ ಬಾಲಿಷ ಹೇಳಿಕೆಗಳನ್ನು ಚಿದಾನಂದಮೂರ್ತಿಯವರಂಥ ಹಿರಿಯರು ನೀಡಬಹುದೆ? ಕಸದ ಬುಟ್ಟಿಗೆ ಲಾಯಕ್ಕಾದ ಇಂಥ ಓದುಗರ ಪತ್ರಗಳನ್ನು ಪತ್ರಿಕೆಗಳು ಪ್ರಕಟಿಸಬೇಕೆ ಎಂಬುದಷ್ಟೆ ನಮ್ಮ ಪ್ರಶ್ನೆಯಾಗಿತ್ತು.

ಹಿಂದುತ್ವವಾದಿಯಾಗಿರುವುದರಲ್ಲಿ ಯಾವ ತಪ್ಪಿದೆ ಎಂದು ರವಿ ಸೊಂಡೂರ್ ಪ್ರಶ್ನಿಸುತ್ತಾರೆ. ಯಾವ ತಪ್ಪೂ ಇಲ್ಲ ಎಂಬುದು ನಮ್ಮ ಉತ್ತರ. ಹಿಂದುತ್ವವಾದಿಗಳು ಇಸ್ಲಾಂ, ಕ್ರಿಶ್ಚಿಯನ್ ದ್ವೇಷಿಗಳಾಗಿದ್ದರೆ ಆಗ ಸಮಸ್ಯೆ ಉದ್ಭವಿಸುತ್ತದೆ. ಅದೇ ರೀತಿ ಮುಸಲ್ಮಾನರು, ಕ್ರಿಶ್ಚಿಯನ್ನರು ಹಿಂದೂಗಳ ದ್ವೇಷಿಯಾದರೂ ಅದು ಸಮಸ್ಯೆಯೇ ಆಗಿರುತ್ತದೆ. ನಿಜವಾದ ಹಿಂದುತ್ವವಾದಿಗಳು ಈ ಬಗೆಯ ಪರಧರ್ಮ ವಿರೋಧಿ ನೆಲೆಯಿಂದಲೇ ಉದ್ಭವಿಸಬೇಕಾಗಿಲ್ಲ. ಎಲ್ಲ ಹಿಂದುತ್ವವಾದಿಗಳು ಈ ಬಗೆಯ ದ್ವೇಷವನ್ನು ಬೆಳೆಸಿಕೊಂಡಿದ್ದರೆ ಭಾರತ ದೇಶ ಇಷ್ಟು ಹೊತ್ತಿಗೆ ಒಡೆದು ಚೂರುಚೂರಾಗಬೇಕಿತ್ತು.

ಹಿಂದೂಗಳು ಸೆಕ್ಯುಲರ್ ಅಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಹಿಂದೂಗಳಲ್ಲಿ ಒಂದು ಸಣ್ಣ ಪ್ರಮಾಣದ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಸೆಕ್ಯುಲರ್ ಆಗಿದ್ದಾರೆ. ಇವರೇ ನಿಜವಾದ ಹಿಂದೂಗಳು.

ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದು ಯಾವ ಹಿಂದೂ ಧರ್ಮವನ್ನು ಎಂಬುದನ್ನು ನಾವು ಮೊದಲು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ವಿವೇಕಾನಂದರನ್ನು ನಿಜವಾದ ಹಿಂದುತ್ವದ ಮುಖವಾಣಿಯನ್ನಾಗಿ ನಾವು ಗ್ರಹಿಸಬೇಕು. ವೇದಾಂತದ ಮೆದುಳು, ಇಸ್ಲಾಂನ ದೇಹ ಎರಡೂ ಒಂದಾದರೆ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂದು ಹೇಳಿದವರು ವಿವೇಕಾನಂದರು. ಮಾಂಸದಂಗಡಿಗಳನ್ನು, ಹಸಿರು ಧ್ವಜಗಳನ್ನು ನೋಡಿ ಖಿನ್ನತೆಗೆ ಒಳಗಾಗುವರಿಗೆ ಇದು ಅರ್ಥವಾಗುವುದು ಹೇಗೆ? ಇವತ್ತು ಸ್ವಾಮಿ ವಿವೇಕಾನಂದರೇ ಸೊ ಕಾಲ್ಡ್ ಹಿಂದುತ್ವವಾದಿಗಳಿಗೆ ಬೇಕಾಗಿಲ್ಲ, ಅದು ನಿಜವಾದ ಸಮಸ್ಯೆಗೆ ಕಾರಣ.

ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದು ಮಹಾತ್ಮಗಾಂಧಿಯವರೇ ಹೇಳಿದ್ದರು ಎಂದು ರವಿ ಹೇಳುತ್ತಾರೆ. ಇಂಥ ಹೆಮ್ಮೆಯ ಹಿಂದೂವನ್ನು ಕೊಂದವರೂ ಹಿಂದೂ ಮೂಲಭೂತವಾದಿಗಳು ಎಂಬುದನ್ನು ಮರೆಯುವಂತಿಲ್ಲ. ಗಾಂಧೀಜಿಯವರ ಹಿಂದೂ ಧರ್ಮವೇ ಬೇರೆ, ಅವರನ್ನು ಕೊಂದವರ ಹಿಂದೂ ಧರ್ಮವೇ ಬೇರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ತೀರಾ ಅಗತ್ಯ. ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಸರಿಯಾದ ಅರ್ಥದಲ್ಲಿ ಗೊತ್ತುಮಾಡಿಕೊಳ್ಳುವುದೂ ಸಹ ಅನಿವಾರ್ಯ.

ದೇಶದಲ್ಲಿ ಬಲವಂತದ ಮತಾಂತರ ನಡೆಯುತ್ತಿಲ್ಲವೇ ಎಂಬುದು ರವಿ ಅವರ ಇನ್ನೊಂದು ಪ್ರಶ್ನೆ. ಮತಾಂತರ-ಧರ್ಮಾಂತರಗಳು ಕಾಲಕಾಲಕ್ಕೆ ಸಮಾಜದಲ್ಲಿ ಸಂಭವಿಸಿಕೊಂಡು ಬರುವ ಸಹಜ ಪ್ರಕ್ರಿಯೆಗಳು. ಇಡೀ ಜಗತ್ತಿನಲ್ಲಿ ಎಲ್ಲೆಡೆ ಇಂಥವು ನಡೆದುಕೊಂಡೇ ಬಂದಿರುವುದನ್ನು ನಾವು ನೋಡಿದ್ದೇವೆ, ಭಾರತವೂ ಇದಕ್ಕೆ ಹೊರತೇನಲ್ಲ.

ಆದರೆ ಬಲವಂತದ ಮತಾಂತರ ಎಂಬುದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುತ್ತದೆ. ಆಮಿಷದಿಂದ ನಡೆಸುವ ಮತಾಂತರವೂ ಬಹಳ ಸ್ಪಷ್ಟವಾಗಿ ವಂಚನೆಯೇ ಆಗುತ್ತದೆ. ಬಲವಂತದ ಮತಾಂತರವನ್ನಾಗಲಿ, ಆಮಿಷದಿಂದ ನಡೆಯುವ ಮತಾಂತರವನ್ನಾಗಲಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ, ಸಮರ್ಥಿಸಿಕೊಳ್ಳಲೂಬಾರದು. ಕ್ರಿಶ್ಚಿಯನ್ನರ ಕೆಲವು ಸಣ್ಣ ಪಂಥಗಳು ಇಂಥ ಕ್ರಿಯೆಗಳಲ್ಲಿ ತೊಡಗಿವೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಪದೇಪದೇ ಕೇಳಿಬರುತ್ತಿದೆ. ಇಂಥವು ನಡೆಯುತ್ತಿದ್ದರೆ, ಅದನ್ನು ತಡೆಯಲು ನಮ್ಮಲ್ಲಿ ಇರುವ ಲಭ್ಯ ಕಾನೂನುಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಹೊರತಾಗಿ ಚರ್ಚ್‌ಗಳ ಮೇಲೆ ದಾಳಿ ನಡೆಸುವುದು, ಏಸುಮೂರ್ತಿಯನ್ನು ಭಗ್ನಗೊಳಿಸುವುದು, ಕ್ರಿಶ್ಚಿಯನ್ನರ ಮೇಲೆ ಹಲ್ಲೆ ನಡೆಸುವುದರಿಂದ ಮತಾಂತರವನ್ನು ತಡೆಗಟ್ಟುತ್ತೇವೆ ಎನ್ನುವುದು ಮೂರ್ಖತನ. ಹಾಗೆ ಮಾಡುವವರು ನೈಜ ಹಿಂದುತ್ವವಾದಿಗಳಾಗಲು ಹೇಗೆ ಸಾಧ್ಯ? ಇಂಥ ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಿಶ್ಚಿಯನ್ನರು ಪ್ರತಿಭಟಿಸಿದರೆ ಅದರಿಂದ ಚಿದಾನಂದಮೂರ್ತಿಯಂಥವರು ಯಾಕಷ್ಟು ಕಳವಳಕ್ಕೆ ಈಡಾಗುತ್ತಾರೆ? ಯಾಕೆ ಅವರ ಕಣ್ಣಿಗೆ ಹೀಗೆ ಪ್ರತಿಭಟಿಸಿದವರೆಲ್ಲ ಕೋಮುವಾದಿಗಳ ಹಾಗೆ ಕಾಣುತ್ತಾರೆ? ಇದು ನಮ್ಮ ಪ್ರಶ್ನೆ.

ಸೆಕ್ಯುಲರ್ ದೇಶದಲ್ಲಿ ಮುಸ್ಲಿಂ ಲೀಗ್‌ನಂಥ ಪಕ್ಷಗಳೂ ಇವೆ, ಅವುಗಳ ಕುರಿತು ಇಲ್ಲದ ಆಕ್ಷೇಪ ಇತರ ಪಕ್ಷಗಳ (ಬಹುಶಃ ಬಿಜೆಪಿ-ಶಿವಸೇನೆ ಇರಬಹುದು) ಮೇಲೆ ಏಕೆ ಎಂದು ರವಿ ಪ್ರಶ್ನಿಸುತ್ತಾರೆ. ಮುಸ್ಲಿಂ ಲೀಗ್ ಪಕ್ಷವನ್ನು ಈ ದೇಶದ ಮುಸ್ಲಿಮರೆಲ್ಲ ಒಪ್ಪಿಕೊಂಡಿಲ್ಲ. ಹಾಗೆ ಒಪ್ಪಿಕೊಂಡಿದ್ದರೆ ಅದು ಸಹ ಒಂದು ರಾಷ್ಟ್ರೀಯ ಪಕ್ಷವಾಗಿರುತ್ತಿತ್ತು, ಕೇರಳದ ಯಾವುದೋ ಮೂಲೆಗೆ ಸೀಮಿತವಾಗಬೇಕಿರಲಿಲ್ಲ. ಧರ್ಮದ ನೆಲೆಯಲ್ಲಿ ಸ್ಥಾಪನೆಯಾಗುವ ರಾಜಕೀಯ ಪಕ್ಷಗಳು ಅಪಾಯಕಾರಿ. ಅದಕ್ಕೆ ಮುಸ್ಲಿಂ ಲೀಗೂ ಹೊರತಲ್ಲ, ರವಿ ಅವರು ಸೂಚಿಸುವ ಇತರ ಪಕ್ಷಗಳೂ ಹೊರತಲ್ಲ.

ಇನ್ನು ಭಯೋತ್ಪಾದನೆಯ ಕುರಿತೂ ರವಿ ಹೇಳುತ್ತಾರೆ. ಅವರ ಪ್ರಶ್ನೆಯಲ್ಲೇ ಉತ್ತರವಿದೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದು ಸೆಕ್ಯುಲರಿಸ್ಟರ ನಂಬಿಕೆ. ಭಯೋತ್ಪಾದಕರೆಲ್ಲ ಮುಸ್ಲಿಮರು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಸ್ವಾಮಿ ಆಸೀಮಾನಂದರ ತಪ್ಪೊಪ್ಪಿಗೆಯ ನಂತರ ಈಗ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅಫ್ಜಲ್ ಗುರು, ಸಾಧ್ವಿ ಪ್ರಜ್ಞಾಸಿಂಗ್, ಕಸಬ್, ಆಸೀಮಾನಂದ ಎಲ್ಲರೂ ಒಂದೇ ತಳಿಯವರು. ಧರ್ಮದ ಆಫೀಮನ್ನು ಮೈಗೇರಿಸಿಕೊಂಡು ಅಮಾಯಕರ ಬಲಿ ತೆಗೆದುಕೊಂಡವರು. ದೇಶದ ಕಾನೂನು ಇವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಶಿಕ್ಷೆಯನ್ನು ಕೊಡಬೇಕು, ಕೊಡುತ್ತದೆ. ರವಿ ಅವರು ಹೇಳುವಂತೆ ಮೀಡಿಯಾಗಳು ಡಬಲ್ ಸ್ಟಾಂಡರ್ಡ್ ಇಟ್ಟುಕೊಳ್ಳುವುದು ಬೇಡ ಎಂದು ನಾವೂ ಹೇಳುತ್ತಿದ್ದೇವೆ. ಇಸ್ಲಾಂ ಭಯೋತ್ಪಾದನೆ ಎಂದು ನೀವು ಹೇಳುವುದಾದರೆ ಹಿಂದೂ ಭಯೋತ್ಪಾದನೆ ಎಂದೂ ಸಹ ಹೇಳಬೇಕಾಗುತ್ತದೆ. ಹೇಳುವುದಿದ್ದರೆ ಎರಡನ್ನೂ ಹೇಳಿ. ಇಲ್ಲದಿದ್ದರೆ ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದನ್ನು ಒಪ್ಪಿಕೊಂಡು ಭಯೋತ್ಪಾದಕರನ್ನು ಧರ್ಮದ ಹೆಸರಲ್ಲಿ ಗುರುತಿಸಬೇಡಿ ಎಂಬುದು ನಮ್ಮ ಸಲಹೆ. ರವಿ ಅವರ ಮಾತು ಕೂಡ ಇದನ್ನು ಸಮರ್ಥಿಸುತ್ತದೆ.
ರವಿ ಸೊಂಡೂರ್

ಎಲ್ಲ ಧರ್ಮಗಳೂ ಜಡವಾಗಿ ಹೋಗಿವೆ. ಕಾಲ ಬದಲಾದಂತೆ ಧರ್ಮಗಳೂ ಅಪ್‌ಡೇಟ್ ಆಗಬೇಕಿತ್ತು. ಆದರೆ ಧರ್ಮಗಳು ನಿಂತಿರುವುದು ಎಂದೋ ಯಾರೋ ಕಟ್ಟಿಕೊಟ್ಟ ಸೂತ್ರಗಳನ್ನು ಹಿಡಿದು. ನಾವು ಕುರುಡಾಗಿ ಅವುಗಳಿಗೆ ತಲೆಯೊಡ್ಡಿದ್ದೇವೆ. ಈ ಸೂತ್ರಗಳೇ ಇಂದು ನಮ್ಮ ಕೊರಳಿಗೆ ಉರುಳಾಗಿವೆ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳೂ ಇಂದು ಜಡವಾಗಿವೆ. ಚಲನಶೀಲತೆಯಿಲ್ಲದ ಧರ್ಮಗಳು ನಮ್ಮನ್ನು ಬೌದ್ಧಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಸಲಾರವು. ಇವತ್ತು ಕೋಮುವಾದ, ಭಯೋತ್ಪಾದನೆ, ಬಲವಂತದ ಮತಾಂತರ ಮತ್ತಿತರ ಸಮಸ್ಯೆಗಳಿಗೆ ಇದು ಮೂಲ. ಧರ್ಮದ ವ್ಯಾಖ್ಯೆಗಳನ್ನು ಪುನರ್ ನಿರ್ಮಿಸಿಕೊಳ್ಳದ ಹೊರತು, ಎಲ್ಲ ಧರ್ಮಗಳ ಒಳಗಿನ ಪುರೋಹಿತಶಾಹಿ ಯಥಾಸ್ಥಿತಿವಾದಿಗಳನ್ನು ಹೊರಗೆ ಎಸೆಯದ ಹೊರತು ಈ ಸಮಸ್ಯೆಗಳು ಪರಿಹಾರವಾಗದು.

ಅದನ್ನೇ ವಿವೇಕಾನಂದರು ಪ್ರತಿಪಾದಿಸಿದ್ದರು. ಈ ದೇಶದ ಅಮಾಯಕ ಜನರ ಪ್ರಾಣ ಹಿಂಡುತ್ತಿರುವ ಪುರೋಹಿತಶಾಹಿಗಳನ್ನು ಒದ್ದೋಡಿಸದ ಹೊರತು ದೇಶ ಉದ್ಧಾರವಾಗಲಾರದು ಎಂದು ಅವರು ಗುಡುಗಿದ್ದರು. ವಿವೇಕಾನಂದರು ಹೇಳಿದಂತೆ ಯಥಾಸ್ಥಿತಿವಾದಿ ಶಕ್ತಿಗಳನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು, ಬೌದ್ಧರು, ಜೈನರು ಮತ್ತು ಎಲ್ಲರೂ ತಮ್ಮ ತಮ್ಮ ಧರ್ಮಗಳಿಂದ ಉಚ್ಛಾಟಿಸಬೇಕಿದೆ.

ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
0 komentar

Blog Archive