ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಒಂದು ಲೇಖನ ವನ್ಯಜೀವಿ ಛಾಯಾಗ್ರಾಹಕರಿಗೆ ನೋವುಂಟು ಮಾಡಿದೆ. ಕ್ರಿಯಾಶೀಲ ಬ್ಲಾಗರ್, ಹವ್ಯಾಸಿ ಛಾಯಾಗ್ರಾಹಕ ಶಿವು ಕೆ. ತಮ್ಮ ಛಾಯಾಕನ್ನಡಿ ಬ್ಲಾಗ್‌ನಲ್ಲಿ ಈ ಕುರಿತು ಬರೆದು ಪ್ರತಿಭಟನೆ ದಾಖಲಿಸಿದ್ದಾರೆ.

ಫೋಟೋ ಸುಖ... ಹಕ್ಕಿ ದುಃಖ ಎಂಬ ಲೇಖನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ. ಪತ್ರಕರ್ತ ಡಿ.ಎಂ.ಘನಶ್ಯಾಮ ಇದನ್ನು ಬರೆದಿದ್ದಾರೆ. ಘನಶ್ಯಾಮ ಅವರು ಸಹ ಒಳ್ಳೆಯ ಛಾಯಾಗ್ರಾಹಕರು. ವರದಿಗಾರನ ವೃತ್ತಿಯಲ್ಲಿದ್ದರೂ ಕ್ಯಾಮರಾ ಕೈ ಬಿಡದಷ್ಟು ಸೆಳೆತ ಇಟ್ಟುಕೊಂಡವರು. ಚಿಕ್ಕಮಗಳೂರಿನಲ್ಲಿ ಅವರು ಇತ್ತೀಚಿನವರೆಗೆ ಕೆಲಸ ಮಾಡಿದ್ದರು. ಈಗ ತುಮಕೂರಿಗೆ ವರ್ಗವಾಗಿದೆ ಎಂಬ ಮಾಹಿತಿಯಿದೆ. ಹಿಂದಿನಿಂದಲೂ ಪ್ರಜಾವಾಣಿ ಮಾತ್ರವಲ್ಲದೆ ಸುಧಾ ಪತ್ರಿಕೆಯಲ್ಲೂ ಗಂಭೀರ, ಸಾಮಾಜಿಕ ಎಚ್ಚರದ ಲೇಖನಗಳನ್ನು ಬರೆಯುತ್ತ ಬಂದವರು.

ಶಿವು
ಆದರೆ  ಅವರು ಈ ಲೇಖನದಲ್ಲಿ ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೋಗ್ರಾಫರುಗಳೇ ದೊಡ್ಡ ಆಪತ್ತು. ಫೋಟೋ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ ಎಂದು ಗಂಭೀರ ಆರೋಪವನ್ನೇ ಮಾಡಿದ್ದಾರೆ. ಆರೋಪ ನಿಜವೇ ಆಗಿದ್ದಲ್ಲಿ ಅವರು ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಶಿವು ಅವರು ತಮ್ಮ ಪ್ರತಿಕ್ರಿಯೆಯಲ್ಲೂ ಇದನ್ನೇ ಹೇಳುತ್ತಿದ್ದಾರೆ.

ಸಾಧಾರಣವಾಗಿ ವನ್ಯ ಜೀವಿ ಛಾಯಾಗ್ರಾಹಕರು ಅಗ್ಗದ ಪ್ರಚಾರಕ್ಕಾಗಿ ಪಕ್ಷಿಗಳಿಗೆ ಹಿಂಸೆ ಕೊಡುವಮಟ್ಟಿಗೆ ಪಾತಾಳಕ್ಕೆ ಇಳಿದಾರೆಂದು  ನಮಗೆ  ಈವರೆಗೆ ಅನ್ನಿಸಿರಲಿಲ್ಲ.  ವನ್ಯ ಜೀವಿ ಛಾಯಾಗ್ರಾಹಕರು ಸ್ವಭಾವತಃ ವನ್ಯಜೀವಿ ಪ್ರಿಯರೇ ಆಗಿರುತ್ತಾರೆ. ಹಿಂಸಾವಿನೋದಿಗಳು ಇವರಲ್ಲೂ ಕೆಲವರಿರಬಹುದು  ಎಂದೇ ನಾವು ಭಾವಿಸಿದ್ದೆವು.  ಒಂದುವೇಳೆ ಘನಶ್ಯಾಮ ಹೇಳುತ್ತಿರುವುದು ನಿಜವೆನ್ನುವುದಾದರೆ ಅದು ಆತಂಕದ ವಿಷಯ.

ಹೇಗೂ ಜೇನುಗೂಡಿಗೆ ಕಲ್ಲು ಬಿದ್ದಾಗಿದೆ. ಸ್ವತಃ ಘನಶ್ಯಾಮ ಅವರೇ ಈ ವಿಷಯದ ಕುರಿತು ಇನ್ನಷ್ಟು ಬೆಳಕು ಚೆಲ್ಲಿದರೆ (ಸಾಪ್ತಾಹಿಕ ಪುರವಣಿಯಲ್ಲೇ) ಎಲ್ಲರ ದೃಷ್ಟಿಯಿಂದ ವಿಶೇಷವಾಗಿ ಬಡಪಾಯಿ ಪಕ್ಷಿಗಳ ದೃಷ್ಟಿಯಿಂದ ಒಳ್ಳೆಯದು.

 ಘನಶ್ಯಾಮ ಬರೆದಿರುವ ಮೂಲ ಲೇಖನ ಪ್ರಜಾವಾಣಿಯ ಸಾಪ್ತಾಹಿಕದಲ್ಲಿದೆ. ಒಮ್ಮೆ ಗಮನಿಸಿ.
http://220.227.178.12/prajavani/web/include/story.php?news=1591&section=54&menuid=13
 ಹಾಗೆಯೇ ಶಿವು ಅವರ ಪ್ರತಿಕ್ರಿಯೆ ಓದಲು ಈ  ಕೆಳಗಿನ ಲಿಂಕ್ ಬಳಸಿ.
http://chaayakannadi.blogspot.com/2011/04/blog-post_10.html
ನಿಮ್ಮ ಅಭಿಪ್ರಾಯ ಹೇಳಲು ಮರೆಯಬೇಡಿ.
0 komentar

Blog Archive