ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಾರೆ. ನಾರಾಯಣಮೂರ್ತಿಯವರಿಂದ ಸಮ್ಮೇಳನ ಉದ್ಘಾಟಿಸುವ ಸರ್ಕಾರದ ನಿಲುವು ಈಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ, ಟಿವಿ ಚಾನಲ್‌ಗಳಲ್ಲಿ, ಇ-ಮ್ಯಾಗಜೀನ್‌ಗಳಲ್ಲಿ, ಬ್ಲಾಗ್‌ಗಳಲ್ಲಿ, ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ, ಎಸ್‌ಎಂಎಸ್‌ಗಳಲ್ಲಿ ಬಿರುಸಿನ ಚರ್ಚೆ ನಡೆದಿದೆ.

ಈ ಕುರಿತು ಸಂಪಾದಕೀಯವೂ ಒಂದು ಚರ್ಚೆ ನಡೆಸಬೇಕು ಎಂಬುದು ಹಲವರ ಬೇಡಿಕೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಕುವೆಂಪು ವಿಶ್ವವಿದ್ಯಾಲಯದ ಡಾ. ಕಿರಣ್ ಎಂ.ಗಾಜನೂರು ಬರೆದ ಒಂದು ಟಿಪ್ಪಣಿಯನ್ನು ನಿಮ್ಮ ಮುಂದಿರಿಸಿದ್ದೇವೆ. ಎಲ್ಲರ ಅಭಿಪ್ರಾಯಗಳಿಗೂ ಸ್ವಾಗತ. ಆದರೆ, ವೈಯಕ್ತಿಕ ನಿಂದನೆ, ಕುಹಕದ ಪ್ರತಿಕ್ರಿಯೆಗಳು ಬೇಡ. ಇಂಥವನ್ನು ಪ್ರಕಟಿಸುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸುತ್ತೇವೆ. ನಿಮ್ಮ ಪ್ರತಿಕ್ರಿಯೆ ವಸ್ತುನಿಷ್ಠವಾಗಿರಲಿ, ಹೊಸ ಹೊಳಹುಗಳನ್ನು ನೀಡುವಂತಿರಲಿ, ಸಂದರ್ಭೋಚಿತವಾಗಿರಲಿ.

ಡಾ.ಕಿರಣ್ ಅವರ ಪ್ರತಿಕ್ರಿಯೆ ಇಲ್ಲಿದೆ.

ಕಿರಣ್ ಗಾಜನೂರ್
ಒಂದು ಅರ್ಥದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಮೂಲ ಉದ್ದೇಶ ಕರ್ನಾಟಕವನ್ನು, ಕನ್ನಡ ಸಂಸ್ಕೃತಿಯನ್ನು ಬೌದ್ಧಿಕವಾಗಿ, ಆಕರ್ಷಕವಾಗಿ ಹೊರಜಗತ್ತಿನ ಮುಂದೆ ಮಂಡಿಸುವುದಾಗಿದೆ. ಆದರೆ ಮಂಡಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಬಹಳ ಪ್ರಮುಖ. ಅದಕ್ಕೆ ಉತ್ತರವಾಗಿ ನಾರಾಯಣ ಮೂರ್ತಿಯವರಂತಹ ಒಬ್ಬ ಆಧುನಿಕ (ಬಂಡವಾಳ ಶಾಹಿ) ವ್ಯಾಪಾರಿ ಸಮ್ಮೆಳನವನ್ನು ಉದ್ಘಾಟಿಸಿದರೆ ಸಮ್ಮೇಳನದ ಉದ್ದೇಶ ಈಡೇರಬಹುದು ಎಂದು ಸರ್ಕಾರ ಚಿಂತಿಸಿದಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬರಗೂರು ಅವರು ಎತ್ತಿರುವ ತಾತ್ವಿಕ ಭಿನ್ನಾಭಿಪ್ರಾಯ ಒಂದು ನೆಲೆಯಿಂದ ಬಹಳ ಮಹತ್ವವಾದುದು. ಅಂದರೆ ಒಂದು ಭಾಷೆ, ಸಂಸ್ಕೃತಿ ತನ್ನನ್ನು ತಾನು ಹೊರಜಗತ್ತಿಗೆ ವಾಣಿಜ್ಯೀಕರಿಸಿಕೊಳ್ಳುವುದು ಸುಲಭ. ಆದರೆ ಅದು ರೋಗದ ಮಾರ್ಗ. ಒಂದು ನಾಡು ತನ್ನಲ್ಲಿರುವ ಕಲೆ, ಜೀವನಕ್ರಮದ ಉತ್ಸವಗಳನ್ನೂ ವಾಣಿಜ್ಯೀಕರಿಸಿ ಅದನ್ನು ರಫ್ತು ಮಾಡಲು ಪ್ರಯತ್ನಿಸುವುದು ಅಗ್ಗದ ದಾರಿ. ಮತ್ತು ಅಂತಹ ಒಂದು ಸಮಾರಂಭಕ್ಕೆ ಜಗತ್ತಿನ ವಾಣಿಜ್ಯೀಕರಣದ ರೂವಾರಿ ನಾರಾಯಣ ಮೂರ್ತಿಯಂತಹವರನ್ನು ಕರೆಸುವುದು ಇನ್ನು ಅಗ್ಗದ ದಾರಿ. ಇದನ್ನೆ ಬರಗೂರು ಅವರು ಇದು ಆತ್ಮಗೌರವದ ಪ್ರಶ್ನೆ ಎಂದು ಕರೆದಿದ್ದು ಎಂದು ನನಗೆ ಅನ್ನಿಸುತ್ತದೆ. ವಿಶ್ವಕನ್ನಡ ಸಮ್ಮೇಳನದ ಮುಖ್ಯ ಉದ್ದೇಶ ಜಾಗತೀಕರಣದ ಬಿರುಗಾಳಿಗೆ, ವ್ಯಾಪಾರಿ ಪ್ರಪಂಚದ ಏಕರೂಪದ ಸಂಸೃತಿಯ ನಿರ್ಮಾಣದ ಮೂಢತನಕ್ಕೆ ವೇದಿಕೆ (ಸಂಸ್ಕೃತಿಯನ್ನೆ ವ್ಯಾಪಾರಿ ಸರಕಾಗಿಸಿ) ಒದಗಿಸುವುದಲ್ಲ. ಬದಲಾಗಿ ಕನ್ನಡವನ್ನು, ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯನ್ನು ಇಲ್ಲಿನ ಜನಜೀವನವನ್ನು ಜಗತ್ತಿಗೆ ತಲುಪಿಸಿ ಜಗತ್ತು ಇಲ್ಲಿಂದ ಈ ನೆಲದಿಂದ ಕಲಿಯುವುದು ಏನಿದೆ ಎಂಬುದನ್ನು ತೋರಿಸುವ ಉದ್ದೇಶ ಹೊಂದಬೇಕು. ಅದಕ್ಕೆ ಬರಗೂರು ಹೇಳಿದಂತೆ ಸಾಹಿತ್ಯದ ಹಿನ್ನೆಲೆಯ ವ್ಯಕ್ತಿ ಸಮ್ಮೇಳನ ಉದ್ಘಾಟಿಸಿದರೆ ಸೂಕ್ತ ಎಂಬುದು ನನ್ನ ಅಭಿಪ್ರಾಯ.

                                                                         -Dr. Kiran.M Gajanur, 
                                                                         R.T.A.In Political Science,
                                                                         Directorate of Distance Education
                                                                         Kuvempu university
0 komentar

Blog Archive