ನಾವು ಆಧುನಿಕ ಸ್ಮೃತಿಕಾರರು
ಬರೆದದ್ದೆಲ್ಲ ಬ್ರಹ್ಮಲಿಪಿ
ಪ್ರಶ್ನೆ ಮಾಡಬೇಡಿ;
ಸಾಕ್ಷಾತ್ ಗಣಪತಿಯ ಕೈಗಳು ನಮ್ಮವು
ನಾವು ಬರೆಯೋದೆಲ್ಲ ಸತ್ಯ
ಒಪ್ಪಿಕೊಳ್ಳದವರೇ ಇಲ್ಲಿ ಮಿಥ್ಯ

ನಾವು ಬರೆಯುತ್ತೇವೆ
ನಮ್ಮದೇ ಸಂವಿಧಾನ, ಅದಕ್ಕೆ ನಮ್ಮದೇ ಭಾಷ್ಯ
ಓದುವುದಿದ್ದರೆ ಓದಿ, ಇಲ್ಲವೇ ಬಿಡಿ
ನಾವು ನಿಮ್ಮ ಆಕೃತಿಗಳ ಮೇಲೆ ಕಾದ ಸೀಸ ಸುರಿಯುತ್ತೇವೆ

ನಾವು, ಆಸೆಬುರುಕರು
ಧನಕನಕಗಳು ಬೇಕು, ಯಾರು ಕೊಟ್ಟರೂ ನಡೆದೀತು
ಕೊಟ್ಟವನು ಈರಭದ್ರ, ಕೊಡದವನು ಕೋಡಂಗಿ

ನಾವು ನಿಮ್ಮ ಎದೆಯ ಮೇಲೆ ಅಕ್ಷರ ಕಟ್ಟಿ
ಅಲ್ಲೇ ಸೈಟು ಗಿಟ್ಟಿಸುತ್ತೇವೆ, ಮನೆ ಕಟ್ಟಿಕೊಳ್ಳುತ್ತೇವೆ
ನಮ್ಮ ಮಹಲುಗಳ ಬಳಪದ ಕಲ್ಲುಗಳಲ್ಲಿ
ನಿಮ್ಮ ದೈನ್ಯ ಮುಖವೇ ಪ್ರತಿಫಲಿಸುತ್ತದೆ

ನಿಮ್ಮ ದೈನೇಸಿ ಬದುಕೇ ನಮಗೆ ರಿಯಾಲಿಟಿ ಶೋಗಳು
ನಿಮ್ಮ ಆಸೆ, ಸಂಕಟ, ಕಣ್ಣೀರು, ಕೊರಗನ್ನೆಲ್ಲ ನಾವು ಮಾರುತ್ತೇವೆ
ಒಮ್ಮೊಮ್ಮೆ ನಿಮ್ಮ ಸಾವೂ ನಮಗೆ ಮಾರಾಟದ ವಸ್ತು

ನಾವು ಜಗಳ ಹಚ್ಚುತ್ತೇವೆ, ಗಲಭೆ ಎಬ್ಬಿಸುತ್ತೇವೆ
ಆಧುನಿಕ ನಾರದ ಸಂತತಿಗಳು ನಾವು
ನಿಮ್ಮನಿಮ್ಮಲ್ಲೇ ಚಪ್ ಚಪ್ಪಲೀಲಿ ಹೊಡೆದಾಡಿಸುತ್ತೇವೆ
ಚಪ್ಪಲಿಗೆ ಪಾಯಿಂಟ್ ಐದು ಟಿಆರ್‌ಪಿ ಇದೆ, ನಿಮಗೆ ಗೊತ್ತೆ?

ನಾವು ನಿಮ್ಮ ಭೂತ, ಭವಿಷ್ಯ, ವರ್ತಮಾನ
ಎಲ್ಲವನ್ನೂ ಹೇಳುತ್ತೇವೆ ಅಥವಾ ಹೇಳಿಸುತ್ತೇವೆ
ನಾವು ಒಮ್ಮೆ ಕರೆಕೊಟ್ಟರೆ ನೀವು
ಐದೆಣ್ಣೆಯ ದೀಪ ಇಟ್ಟುಕೊಂಡು ಕೋಡಂಗಿ ವೇಷ ತೊಟ್ಟು ಬೀದಿಗೆ ಬರುತ್ತೀರಿ
ನಿಮ್ಮ ಭವಿಷ್ಯವನ್ನು ನಾವು ನಮ್ಮ ಟಿಆರ್‌ಪಿಗಾಗಿ ಹರಾಜಿಗಿಟ್ಟಿದ್ದೇವೆ

ನಾವು ಮಂತ್ರಿ ಮಹೋದಯರನ್ನು ಸೃಷ್ಟಿಸುವವರು
ಸರ್ಕಾರಗಳನ್ನು ಕೆಡಹುವವರು
ಭವ್ಯಾತಿಭವ್ಯ ಡೀಲುಗಳನ್ನು ಕುದುರಿಸುವವರು
ನಾವು ಕಾರ್ಪರೇಟ್ ದಳ್ಳಾಳಿಗಳು
ಹಿಡಿಯಲು ಕೈಯಾದರೇನು, ಕಾಲಾದರೇನು, ತಲೆಯಾದರೇನು?
ನಮಗೆ ಸಾಕ್ಷಿಗಳಷ್ಟೇ ಬೇಕು, ಅಂತಃಸಾಕ್ಷಿ ಬೇಕಿಲ್ಲ

ನಾವು ಹೊಸವೇಷದ ಪರಂಗಿಗಳ ಕೂಲಿಗಳು
ಅವರ ಬೂಟುಗಳಲ್ಲಿ ಜಾಗ ಮಾಡಿಕೊಂಡು ಬೆಚ್ಚಗೆ ಮಲಗಿದವರು
0 komentar

Blog Archive