ಪತ್ರಕರ್ತ ಮೌನೇಶ್ ವಿಶ್ವಕರ್ಮ, ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೋನಲ್ಲಿ ಬಾಲಕನೊಬ್ಬನನ್ನು ಅಮಾನವೀಯವಾಗಿ ಹಿಂಸಿಸುವ ಕಾರ್ಯಕ್ರಮ ಪ್ರಸಾರವಾಗಿರುವ ಕುರಿತು ಲೇಖನವೊಂದನ್ನು ಬರೆದು ಗಮನ ಸೆಳೆದಿದ್ದಾರೆ. ಇದು ಅವರ ಬ್ಲಾಗ್ ಮೌನವೇ ರಾಗದಲ್ಲೂ ಪ್ರಕಟಗೊಂಡಿದೆ.

ಮೌನೇಶ್ ಅವರ ಲೇಖನವನ್ನು ಗಮನಿಸಿದರೆ, ರಿಯಾಲಿಟಿ ಶೋ ಹೆಸರಿನಲ್ಲಿ ನಡೆಯುತ್ತಿರುವ ಕುಚೇಷ್ಟೆಗಳು ಯಾವ ಹಂತ ತಲುಪಿದೆ ಎಂಬುದು ಅರ್ಥವಾಗುತ್ತದೆ.

ಮೌನೇಶ್ ಗಮನಿಸಿರುವ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ.

ಬಾಗಲಕೋಟೆಯ ಕೆರ್‌ಕಲ್ ಮಟ್ಟಿ ಎಂಬ ಹಳ್ಳಿಯ ಮನೆಯೊಂದರಲ್ಲಿ ಸುಮಾರು ೬ ವರ್ಷದ ಪುಟ್ಟ ಬಾಲಕನೊಬ್ಬನೊಂದಿಗೆ ವಾಗ್ವಾದಕ್ಕಿಳಿಯುವ ಪ್ಯಾಟಿ ಹುಡ್ಗಿಯರಿಬ್ಬರು, ಬಾಲಕನ ಅಂಗಿಯ ಬಟನ್‌ಗಳನ್ನು ತೆಗೆಯುತ್ತಾರೆ, ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಇಬ್ಬರೂ ಸೇರಿ ಬಾಲಕ ಧರಿಸಿದ್ದ ಪ್ಯಾಂಟ್ ಅನ್ನು ಎಳೆದು ತೆಗೆಯುತ್ತಾರೆ. ಬಾಲಕ ಸಿಟ್ಟಿನಿಂದ ಹುಡ್ಗೀರ ವರ್ತನೆಗೆ ಪ್ರತಿರೋಧ ತೋರುತ್ತಾನಾದರೂ ಲೆಕ್ಕಿಸದ ಹುಡ್ಗೀರು ಬಾಲಕನ ಎರಡೂ ಕೈಗಳನ್ನು ಹಿಂದಕ್ಕೆ ಹಿಡಿದುಕೊಂಡು ಬಾಲಕ ಧರಿಸಿದ್ದ ಚಡ್ಡಿಯನ್ನೂ ಎಳೆಯುತ್ತಾರೆ, ತುದಿ ಕತ್ತರಿಸುತ್ತೇನೆ ಎಂದೆಲ್ಲಾ ಹೊಲಸು ಮಾತನಾಡುತ್ತಾರಲ್ಲದೆ, ಈ ದೃಶ್ಯದುದ್ದಕ್ಕೂ ಬಾಲಕನನ್ನು ಅವಾಚ್ಯವಾಗಿ ನಿಂದಿಸುವ ಮಾತುಗಳು ಕೇಳಿ ಬರುತ್ತದೆ.
ವಿವಸ್ತ್ರಗೊಂಡ ಬಾಲಕನನ್ನು ಇಬ್ಬರು ಯುವತಿಯರು ಜೋರಾಗಿ ನಕ್ಕು ಅವಮಾನಿಸುತ್ತಾರಲ್ಲದೆ, ಈಗೆಲ್ಲಿ ನಿನ್ನ ಪೊಗರು ಎಂಬೆಲ್ಲಾ ಅರ್ಥ ಬರುವಂತೆ ಮಾತನಾಡುವ ಸನ್ನಿವೇಶಗಳು ಮುಂದಿನ ದೃಶ್ಯಗಳಲ್ಲಿ ಅಡಕವಾಗಿದೆ. ಕೊನೆಯಲ್ಲಿ ಹುಡ್ಗೀರ ವರ್ತನೆಗೆ ಆಕ್ರೋಶಗೊಂಡ ಬಾಲಕ ಕತ್ತಿ ಹಿಡಿದು ಹುಡುಗಿಯರನ್ನು ಬೆದರಿಸಿ ಬೆನ್ನಟ್ಟುವ ದೃಶ್ಯಗಳನ್ನು ವಾಹಿನಿಯು ಹೊಡಿ ಮಗ.. ಹೊಡಿ ಮಗಾ ಹಿನ್ನೆಲೆ ಹಾಡಿನೊಂದಿಗೆ ಪ್ರಸಾರ ಮಾಡಿದೆ.
ಮೌನೇಶ್ ವಿಶ್ವಕರ್ಮ

ಇದು ಯಾವ ಸೀಮೆಯ ರಿಯಾಲಿಟಿ ಶೋ? ಇದು ಮಗುವಿನ ಮೇಲೆ ನಡೆಸಿದ ಅತ್ಯಾಚಾರವಲ್ಲವೆ? ಲೈಂಗಿಕ ಕಿರುಕುಳವಲ್ಲವೆ? ಕಾರ್ಯಕ್ರಮ ನಿರ್ಮಾಪಕರು, ಚಾಲನ್ ಮುಖ್ಯಸ್ಥರು ಹಾಗು ಮಗುವಿಗೆ ಹಿಂಸೆ ಕೊಟ್ಟ ಹುಡುಗಿಯರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕಲ್ಲವೆ?

ಒಂದು ವೇಳೆ ಮಗುವನ್ನು ಅಭಿನಯಿಸುವಂತೆ ಹೇಳಿ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೆಂಥ ಕೀಳು ಬಗೆಯ ಅಭಿರುಚಿ? ಹಣಕ್ಕಾಗಿ ಟಿವಿ ವಾಹಿನಿಗಳು ಇಷ್ಟು ಪಾತಾಳಕ್ಕೆ ಇಳಿಯಬಹುದೆ?

ಇದನ್ನೆಲ್ಲ ದೂಸ್ರಾ ಮಾತನಾಡದೆ ಸಹಿಸಿಕೊಳ್ಳುತ್ತಿರುವ ನಮ್ಮ ಬಗೆಯೇ ನಮಗೆ ಅಸಹ್ಯ ಮೂಡುವಂತಾಗಿದೆ. ನಾವು ಇಷ್ಟೊಂದು ಇನ್‌ಸೆನ್ಸಿಟಿವ್ ಆಗಿ ಹೋಗಿದ್ದೇವೆಯೇ?
0 komentar

Blog Archive