ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ಇನ್ನಿಲ್ಲ. ಸಂಡೆ ಇಂಡಿಯನ್ ಪತ್ರಿಕೆಗಾಗಿ ಅವರನ್ನು ಹಿಂದೆ ಸಂದರ್ಶಿಸಿದ್ದ ಪತ್ರಕರ್ತ ಹರ್ಷಕುಮಾರ್ ಕುಗ್ವೆ ತಮ್ಮ ನೆನಪುಗಳ ಜತೆಗೆ, ಸಂದರ್ಶನದ ಪೂರ್ಣಪಾಠವನ್ನು ಒದಗಿಸಿದ್ದಾರೆ. ಲಿಂಗದೇವರು ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತಾರೆ- ಸಂಪಾದಕೀಯ

ಲಿಂಗದೇವರು ಹಳೆಮನೆ ಇನ್ನಿಲ್ಲ ಎಂದು ಮೈಸೂರಿನ ಪ್ರಜಾವಾಣಿಯಲ್ಲಿರುವ ಗೆಳೆಯ ನಾಗರಾಜ ಬುರಡಿಕಟ್ಟಿ ಮುಂಜಾನೆ ೪ ಘಂಟೆಗೆ ಕಳಿಸಿದ್ದ ಮೆಸೇಜನ್ನು ಐದು ಗಂಟೆಗೆ ಎದ್ದು ನೋಡಿದ ನನಗೆ ನಂಬಿಕೆಯೇ ಬರಲಿಲ್ಲ. ಮತ್ತೆ ಕೂಡಲೇ ಕಾಲ್ ಮಾಡಿ ಕೇಳೀದೆ.

ನಾಗು.., ಅದು ನಿಜವೇನೋ?.

ಹೌದು ಮಾರಾಯಾ, ರಾತ್ರಿ ಹನ್ನೆರಡೂ ಮುಕ್ಕಾಲಿನ ಸುಮಾರಿಗೆ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಬಿಟ್ಟರು.....

ಆಘಾತವೇ ಆಯಿತು. ಇತರೆ ಗೆಳೆಯರಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತಾ, ಈ ಇದುವರಗೆ ನನಗೆ ಪ್ರೀತಿಪಾತ್ರರಾದವರು ಈ ಕ್ರೂರಹೃದಯಾಘಾತದ ದಾಳಿಗೆ ಈಡಾದವರ ಲೆಕ್ಕ ಹಾಕತೊಗಿದೆ. ದೊಡ್ಡಪ್ಪ- ಹನುಮಂತಪ್ಪ, ಮಾವ- ನಾರಾಯಣಪ್ಪ, ಗೆಳೆಯ ಶರತ್, ಪ್ರೀತಿಯ ನೋಸಂತಿ ಮೇಸ್ಟ್ರು, ಅಚ್ಚುಮೆಚ್ಚಿನ ಗೆಳೆಯ, ರಂಗಕರ್ಮಿ, ಹಾಡುಗಾರ ಗೋಪಾಲಣ್ಣ, ಕಿರಂ ಮೇಸ್ಟ್ರು............ ಈಗ ಮತ್ತೆ.........

ಶಿವಮೊಗ್ಗದಲ್ಲಿ ರಂಗಾಯಣದ ಘಟಕವನ್ನು ಆರಂಭಿಸುವುದಾಗಿ ಮೊನ್ನೆಯಷ್ಟೇ ಲಿಂಗದೇವರು ಹಳೆಮನೆಯವರು ನಡೆಸಿದ್ದ ಪತ್ರಿಕಾ ಗೋಷ್ಠಿಯನ್ನು ನೋಡಿ ಸಂತಸವಾಗಿತ್ತು. ಒಂದು ಕರೆ ಮಾಡಿ ಅವರಿಗೊಂದು ಥ್ಯಾಂಕ್ಸ್ ಹೇಳೋಣ ಎಂದು ಯೋಚಿಸುತ್ತಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಇರುವ ಹೆಗ್ಗೋಡಿನ ನೀನಾಸಂ, ತುಮರಿಯ ಕಿನ್ನರ ಮೇಳ ಗಳ ಜೊತೆಗೆ ಅಲ್ಲೊಂದು ರಂಗಾಯಣವೂ ಆರಂಭವಾದರೆ ಎಷ್ಟು ಚೆನ್ನ ಎನ್ನಿಸಿತ್ತು. ಹವ್ಯಾಸಿ ನಾಟಕದ ಕೆಲವಾರು ಗೆಳೆಯರೂ ಹುರುಪಿನಲ್ಲಿದ್ದರು.

ಲಿಂಗದೇವರು ಅನುವಾದಿಸಿದ್ದ ಜೀನ್ ಪಾಲ್ ಸಾರ್ತರ್‌ನ ನೆರಳಿಲ್ಲದ ಮನುಷ್ಯರು ನಾಟಕವನ್ನು ರಂಗಾಯಣದ ಭಾರತೀಯ ರಂಗಶಾಲೆಯ ವಿದ್ಯಾರ್ಥಿಗಳು ನೆನ್ನೆಯಷ್ಟೇ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಿದ್ದರು. ನೆನ್ನೆ ಮಧ್ಯಾಹ್ನದವರೆಗೂ ಶಿವಮೊಗ್ಗದಲ್ಲೇ ಇದ್ದ ಹಳೇಮನೆಯವರು ರಾತ್ರಿ ಮೈಸೂರಿನ ಮನೆಗೆ ಬಂದು ಚಿರನಿದ್ರೆಗೆ ಜಾರಿದ್ದಾರೆ.

ಈಗ್ಗೆ ಕೆಲವು ತಿಂಗಳ ಹಿಂದೆ ಅವರನ್ನು ಸಂದರ್ಶಿಸಲು ಮೈಸೂರಿಗೆ ಹೋಗಿದ್ದಾಗಲಷ್ಟೇ ಅವರು ನನಗೆ ವೈಯುಕ್ತಿಕವಾಗಿ ಪರಿಚಯವಾದದ್ದು. ಅತ್ಯಂತ ಪ್ರೀತಿಪೂರ್ವಕವಾಗಿ ಮಾತಾಡಿ ಕಳುಹಿಸಿದ್ದರು. ಆ ದಿನ ಅವರು ಅದೆಷ್ಟು ಬ್ಯುಸಿಯಾಗಿದ್ದರು ಎಂದರೆ ನನ್ನೊಂದಿಗೆ ಅವರು ಕುಳಿತು ಒಂದೈದು ನಿಮಿಷ ಮಾತಾಡುವುದೂ ಸಾಧ್ಯವಿಲ್ಲವೇನೋ ಎಂದುಕೊಂಡಿದ್ದೆ. ಆದರೆ ಕೊನೆಗೆ ರಂಗಾಯಣದ ಅವರ ಛೇಂಬರ್‌ನಲ್ಲಿ, ಅವರೆದುರು ಕುಳಿತು ನಾನು ಕೇಳಿದ ಪ್ರತಿಯೊಂದು ಪ್ರಶ್ನೆಗೂ ತುಂಬಾ ತಾಳ್ಮೆಯಿಂದಾ ಗಂಟೆಗೂ ಹೆಚ್ಚು ಕಾಲ ಉತ್ತರಿಸಿದ್ದರು. ಈ ಮಾತುಕತೆಯನ್ನು ಅವರ ಕುರ್ಚಿಯ ಹಿಂದುಗಡೆಯ ಗೋಡಯ ಮೇಲಿದ್ದ ಬಿ.ವಿ.ಕಾರಂತರು ದಿಟ್ಟಿಸಿ ನೋಡುತ್ತಿದ್ದರು. ಮತ್ತೆ ಸಂಜೆ ರ ಗಂಟೆಗೆ ಅವರಿಗೆ ಕಾರ್ಯಕ್ರಮ ನಿಗದಿಯಾಗಿತ್ತಾದ್ದರಿಂದ ಇನ್ನೂ ಹೆಚ್ಚು ಹೊತ್ತು ಮಾತನಾಡಲಾಗಲಿಲ್ಲ.


ಅವರ ಸಂದರ್ಶನ ದ ಸಂಡೇ ಇಂಡಿಯನ್ನಲ್ಲಿ ಪ್ರಕಟವಾದ ಮೇಲೆ ಅವರಾಗಿಯೇ ಕಾಲ್ ಮಾಡಿ ‘ಥ್ಯಾಂಕ್ಸ್ ಹರ್ಷ. ಎಲ್ಲಾ ಸರಿಯಾಗಿಯೇ ಬಂದಿದೆ ಎಂದಿದ್ದರು.

ವಿವಾದದ ಗೂಡಾಗಿದ್ದ ರಂಗಾಯಣವನ್ನು ಕಳೆದ ಒಂದೂವರೆ ವರ್ಷದಲ್ಲಿ ಅವರು ಸಂಘಟಿಸಿದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ತರಹೇವಾರಿಯ ರಂಗಯೋಜನೆಗಳನ್ನು ಸಿದ್ಧಪಡಿಸಿದರು. ಇತ್ತೀಚೆಗೆ ವೃತ್ತಿರಂಗಭೂಮಿಯ ಸದಾರಮೆಯನ್ನು ಹವ್ಯಾಸಿ ರೆಪರ್ಟಿರಿ ರಂಗಾಯಣದಲ್ಲಿ ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅವರು ನಡೆಸಿದ ಕಾಲೇಜು ರೋಗೋತ್ಸವ ಅನೇಕ ತರುಣ ರಂಗಕರ್ಮಿಗಳ ಪಾಲಿಗೆ ಆಶಾದಾಯಕವಾಗಿ ಪರಿಣಮಿಸಿತ್ತು. ನಾಲ್ಕು ವಿಶ್ವವಿದ್ಯಾಲಯಗಳ ೩೦ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಏಕಕಾಲದಲ್ಲಿ ರಂಗೋತ್ಸವ ನಡೆಸಿದರು. ಈ ಹಿಂದೆ ಭಾರತೀಯ ಭಾಷಾ ಸಂಸ್ಥಾನದಲ್ಲಿದ್ದಾಗಲೂ ಅವರ ಸೇವೆ ಸ್ಮರಣೀಯ. ನಾಡಿನ ಹಿರಿಮೆಯನ್ನು ಸಾರುವ ಸುಮಾರು ನೂರಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು ಲಿಂಗದೇವರು ಹಳೆಮನೆಯವರಿದ್ದಾಗಲೇ. ಹಾಗೇನೇ ಕನ್ನಡ ಕಂಪ್ಯೂಟರ್ ಭಾಷೆಯನ್ನು ಅಭಿವೃದ್ಧಿಪಡಿಸಲು ತೇಜಸ್ವಿಯವರೊಂದಿಗೆ ಸೇರಿ ಅವರು ಆರಂಭಿಸಿದ್ದ ಪ್ರಯತ್ನವೂ ಕೂಡಾ ಮನನೀಯ.

ಲಿಂಗದೇವರನ್ನು ರಂಗಾಯಣ ನಿರ್ದೇಶಕರಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಅವರು ನಕ್ಸಲ್ ಬೆಂಬಲಿಗ ಎಂದು ಯಾರೋ ಕಾಮಾಲೆ ಕಣ್ಣಿನವರು ಹುಯಿಲೆಬ್ಬಿಸಿದ್ದುಂಟು. ಆದರೆ ಲಿಂಗದೇವರು ಹಳೆಮನೆಯವರ ಬರೆಹ, ವಿಚಾರ, ಮಾತು, ಕೃತಿಗಳನ್ನೆಲ್ಲಾ ನೋಡಿದಾಗ ಅವರು ನಮ್ಮ ನಾಡು ನಮ್ಮ ಕಾಲದಲ್ಲಿ ಕಂಡ ಒಬ್ಬ ಮಾನವತಾವಾದಿ ಹಾಗೂ ಮಾನವೀಯ ಸಂವೇದನೆಯುಳ್ಳ ಸಹೃದಯಿ ಎಂಬುದಷ್ಟೇ ಅರಿವಾಗುತ್ತದೆ.

ಮನುಷ್ಯನ ದೇಹ ನಶಿಸಿದ ಮೇಲೆ ಮುಖ್ಯವಾಗಬೇಕಾದದ್ದು ಆತನ ವಿಚಾರಗಳು. ಅವುಗಳೇ ಆ ವ್ಯಕ್ತಿಯನ್ನು ಮತ್ತಷ್ಟು ಕಾಲ ಜೀವಂತವಾಗಿರಿಸುತ್ತವೆ. ಈ ದಿಸೆಯಲ್ಲಿ ಲಿಂಗದೇವರು ಹಳೇಮನೆ ಇನ್ನೂ ನಮ್ಮೊಂದಿಗಿದ್ದಾರೆ.

ದ ಸಂಡೆ ಇಂಡಿಯನ್ ಪತ್ರಿಕೆಗಾಗಿ ಹರ್ಷ ಕುಗ್ವೆ ನಡೆಸಿದ ಸಂದರ್ಶನ

ಒಂದು ಬಗೆಯ ವಿವಾದದ ವಾತಾವರಣದಲ್ಲೇ ತಾವು ರಂಗಾಯಣದ ಸಾರಥ್ಯ ವಹಿಸಿದಿರಿ. ಈಗ ಏನೆನ್ನಿಸಿದೆ?
ಸರ್ಕಾರ ನನ್ನನ್ನು ರಂಗಾಯಣದ ನಿರ್ದೇಶಕ ಎಂದು ಪ್ರಕಟಿಸಿತು. ಆದರೆ ತಕ್ಷಣ ಮಾಡಲಿಲ್ಲ. ೭ ತಿಂಗಳ ತೆಗೆದುಕೊಳ್ತು ಅದಕ್ಕೆ ಅವರದ್ದೇ ಕಾರಣಗಳಿರಬಹುದು. ನನಗಿದ್ದ ಒಂದು ಶಕ್ತಿ ಏನೆಂದರೆ ನಾನು ರಂಗಾಯಣ ಪ್ರಾರಂಭವಾದ ದಿನದಿಂದಲೂ ರಂಗಾಯಣದ ಜೊತೆಯಲ್ಲಿದ್ದವನು. ರಂಗಾಯಣದ ಪ್ರಮುಖ ತೀರ್ಮಾನ ಕೈಗೊಂಡಾಗ ಆಗಾಗಿನ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದವನು. ಇಲ್ಲಿರುವ ಕಲಾವಿದರೂ ಸಹ ನನಗೆ ಪರಿಚಯವಿದ್ದು ಅವರ ಸಮಸ್ಯೆಗಳ ಪರಿಚಯವೂ ಇತ್ತು. ಹಾಗಾಗಿ ಇದನ್ನು ಸಮರ್ಥವಾಗಿ ನಡೆಸುವ ವಿಶ್ವಾಸ ಇತ್ತು. ಇಲ್ಲಿ ಕಲಾವಿದರ ಸೇವಾವಧಿಗೆ ಸಂಬಧಿಸಿ ಕೆಲ ಸಮಸ್ಯೆಗಳಿವೆ. ಇಲ್ಲಿರುವ ಖಾಯಂ ಕಲಾವಿದರಿಗೆ ಕೊಡಬೇಕಾದ ಆರ್ಥಿಕ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ ಎನ್ನುವ ಅಸಮಧಾನ ಅವರಿಗಿದೆ. ಕಳೆದ ೯ ತಿಂಗಳಲ್ಲಿ ಕಲಾವಿದರ ವಿಶ್ವಾಸಗಳಿಸಿಕೊಳ್ಳುವಲ್ಲಿ ನಾನು ಸಫಲನಾಗಿದ್ದೇನೆ. ನಾನು ನಿರ್ದೇಶಕನಾದ ಮೇಲೆ ಯಾವುದೇ ವಿವಾದಗಳು ಆಗಿಲ್ಲ.

ತಾವು ಈಗ ರಂಗಾಯಣದಲ್ಲಿ ನಿರ್ದೇಶಕರಾಗಿದ್ದೀರಿ. ಕರ್ನಾಟಕದಲ್ಲಿ ರಂಗಭೂಮಿ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ನಿಮ್ಮ ಅವಗಾಹನೆ?
ನನ್ನ ಅಭಿಪ್ರಾಯದಲ್ಲಿ ಇಂದು ರಂಗಭೂಮಿ ಸಾಕಷ್ಟು ಪ್ರಾಧಾನ್ಯತೆ ಪಡೆದುಕೊಳ್ತಾ ಇದೆ. ಹವ್ಯಾಸಿ ತಂಡಗಳು ಹಾಗೂ ವೃತ್ತಿನಿರತ ತಂಡಗಳು ಹೆಚ್ಚೆಚ್ಚು ಸಕ್ರಿಯರಾಗ್ತಾ ಇದ್ದಾರೆ. ಇತ್ತೀಚೆಗೆ ಪ್ರೇಕ್ಷಕರು ಕೂಡಾ ಹೆಚ್ಚು ನಾಟಕಗಳೆಡೆ ಬರುತ್ತಿದ್ದಾರೆ. ಸಾಣೆಹಳ್ಳಿಯಂತ ಕಡೆ ಮೂರ‍್ನಾಲ್ಕು ಸಾವಿರ ಜನ, ಮಲ್ಲಾಡಿ ಹಳ್ಳಿಯಂತಹ ಕಡೆ ೨-೩ ಸಾವಿರ ಜನ ನಾಟಕ ನೋಡ್ತಾರೆ. ಹೆಗ್ಗೋಡಿನಲ್ಲಿ ಯಾವಾಗಲೂ ನಾಟಕ ಚಟುವಟಿಕೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಒಂದೆಡೆ ಪ್ರತಿದಿನ ರಂಗಶಂಕರ ಭರ್ತಿ ಇರುತ್ತದೆ, ರವೀಂದ್ರ ಕಲಾಕ್ಷೇತ್ರ ಮತ್ತಿತರ ಕಡೆ ಸಹ ಆಗಾಗ ನಾಟಕಗಳು ನಡೀತವೆ. ಪ್ರೇಕ್ಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಕುಂದಾಪುರ, ದಾರವಾಡಗಳಲ್ಲಿ ನಾಟಕಗಳು ನಡೆಯುತ್ತವೆ. ಇದರ ಜೊತೆ ರಂಗಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯತ್ತಿವೆ. ರಂಗ ಶಿಕ್ಷಣ, ರಂಗ ಪ್ರದರ್ಶನೆಗಳೆಡಡೂ ಬೆಳವಣಿಗೆಯಲ್ಲಿವೆ. ತರಬೇತಿ ಪಡೆದವರಿಗೆ ಅವಕಾಶಗಳೂ ವಿಫುಲವಾಗಿವೆ. ಕೇವಲ ನಾಟಕ ಪ್ರದರ್ಶನವೆ ಅಲ್ಲದೆ ಜಾಹೀರಾತು ಏಜೆನ್ಸಿ, ಕಾರ್ಪೋರೇಟ್ ಸಂಸ್ಥೆಗಳೂ ತಮ್ಮ ಉಪಯೋಗಕ್ಕೆ ರಂಗ ಚಟುವಟಿಕೆಗಳನ್ನು ಬಳಸ್ತಿದಾರೆ.

ನೀವು ನಿರ್ದೇಶಕರಾಗಿ ಬಂದ ಮೇಲೆ ರಂಗಾಯಣಕ್ಕೆ ಯಾವು ದಿಕ್ಕು ನೀಡುವ ಪ್ರಯತ್ನ ಮಾಡಿದ್ದೀರಿ? ಮುಂದಿನ ಚಟುವಟಿಕೆಗಳೇನು?
ಈ ಹಿಂದೆ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಟಾನಕ್ಕೆ ತರಬೇಕಿತ್ತು. ಉದಾಹರಣೆಗೆ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಒಂದು ಚೌಕಟ್ಟು ತಂದು ಅದೀಗ ಯಶಸ್ವಿಯಾಗಿ ನಡೀತಿದೆ. ಪ್ರತಿ ವರ್ಷದ ಗ್ರೀಷ್ಮ ರಂಗೋತ್ಸವವನ್ನು ಪ್ರಸಿದ್ಧ ರಂಗಕರ್ಮಿಗಳ ಹೆಸರಲ್ಲಿ ನಡೆಸಲು ತೀರ್ಮಾನಿಸಿ ಮೈಸೂರಿನಲ್ಲಿ ನಡೆದ ಉತ್ಸವಕ್ಕೆ ಸಿಜಿಕೆ ನೆನಪಿನ ನಾಟಕೋತ್ಸವ ಹಾಗೂ ದಾರವಾಡದಲ್ಲಿ ನಡೆದ ಉತ್ಸವಕ್ಕೆ ಜಿ.ಬಿ.ಜೋಷಿ ನೆನಪಿನ ನಾಟಕೋತ್ಸವ ಎಂದು ಹೆಸರಿಟ್ಟು ಯಶಸ್ವಿಯಾಗಿ ನಡೆಸಿದೆವು. ಈ ವರ್ಷದ ನಮ್ಮ ದೊಡ್ಡ ಸಾಧನೆ ಎಂದರೆ ನವರಾತ್ರಿಯ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾತ್ರ ನಡೆಯುತ್ತಿದ್ದ ಕಾಲೇಜು ನಾಟಕೋತ್ಸವವನ್ನು ಈ ಸಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ನಡೆಸಿದ್ದು. ಪ್ರತಿಯೊಂದು ಕಡೆ ೯ ಕಾಲೇಜುಗಳನ್ನು ಆಯ್ಕೆ ಮಾಡಿ ನಮ್ಮ ನಿರ್ದೇಶಕರನ್ನು ಕಳುಹಿಸಿ ಆ ಕಾಲೇಜುಗಳಲ್ಲಿ ನಾಟಕ ಸಿದ್ಧಪಡಿಸಿ ನವರಾತ್ರಿ ಸಂದರ್ಭದಲ್ಲಿ ವಿವಿಗಳ ಕೇಂದ್ರಸ್ಥಾನದಕ್ಕೆ ಕರೆಸಿ ಒಂಭತ್ತು ದಿನಗಳ ಕಾಲ ನಡೆಸಿದ್ವಿ. ಏಕ ಕಾಲದಲ್ಲಿ ೩೬ ನಾಟಕ ಪ್ರದರ್ಶನ ನಡೆದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈಗ ವೃತ್ತಿ ರಂಗಭೂಮಿಯ ಸದಾರಮೆ ನಾಟಕ ಕೈಗೊಂಡಾಗ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಅದೀಗ ಅತ್ಯಂತ ಯಶಸ್ವೀಯಾಗಿ ನಡೆಯುತ್ತಿದೆ. ಅತ್ಯಂತ ಸಮಾಜ ಮುಖಿಯಾಗಿ ರಂಗಭೂಮಿ ಬೆಳೆಸುವುದು ನನ್ನ ಉದ್ದೇಶ. ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ.

ರಂಗಾಯಣವು ಮಲೆಗಳಲ್ಲಿ ಮದುಮಗಳು ನಂತಹ ವಿನೂತನ ಪ್ರಯೋಗ ನಡೆಸಿ ಮೆಚ್ಚುಗೆಯನ್ನೂ ಗಳಿಸಿತು. ಆದರೆ, ಇಂತಹ ಬಿಗ್ ಬಜೆಟ್ ನಾಟಕಗಳನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯದ ಹವ್ಯಾಸಿ ರಂಗಭೂಮಿ ಇದೆಯೇ?
ಈ ಆತಂಕವನ್ನು ನನ್ನ ಬಳಿ ಈಗಾಗಲೇ ಅನೇಕರು ವ್ಯಕ್ತಪಡಿಸಿದ್ದಾರೆ. ಆದರೆ ಮಲೆಗಳಲ್ಲಿ ಮದುಮಗಳು ನಂತಹದ್ದು ಅಪರೂಪಕ್ಕೆ ನಡೆಯುವ ಒಂದು ರಂಗಕ್ರಿಯೆ. ಅದು ಒಂದು ಥಿಯೇಟ್ರಿಕಲ್ ಇವೆಂಟ್ ಮಾತ್ರ. ಯಾವಾಗಲೂ ನಡೆಯುವಂತಹದ್ದಲ್ಲ. ನಡುನಡುವೆ ಅಂತಹದ್ದು ನಡೆಯುವುದು ರಂಗಭೂಮಿಗೆ ಪೂರಕವಾಗಿರುತ್ತೆ ಎನ್ನುವುದು ನನ್ನ ಅಭಿಪ್ರಾಯ.

ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಕಥೆ, ಕಾದಂಬರಿಗಳಲ್ಲಿ ನಡೆಯುತ್ತಿರುವ ಪ್ರಯೋಗಗಳು ನಾಟಕ ಸಾಹಿತ್ಯದಲ್ಲಿ ಕಂಡು ಬರುತ್ತಿಲ್ಲ. ಕಾರಣವೇನು?
ನಡುವೆ ಆ ರೀತಿಯ ಮಾತು ಕೇಳಿ ಬಂತು. ಆದರೆ ಇತ್ತೀಚೆಗೆ ಅನೇಕ ನಾಟಕಗಳು ಬರ‍್ತಾ ಇದ್ದಾವೆ. ನಮ್ಮ ನಂತರದ ತಲೆಮಾರಿನಲ್ಲೂ ಅನೇಕರು ಹುಟ್ಟಿಕೊಂಡಿದ್ದಾರೆ. ಉದಾಹರಣೆಗೆ ಲಕ್ಷ್ಮೀಪತಿ ಕೋಲಾರ, ಕೆ.ವೈ.ನಾರಾಯಣ ಸ್ವಾಮಿ, ವೇಣುಗೋಪಾಲ್ ಮೂತಾದವರು. ಕಾವ್ಯ, ಕಥೆಗಳಲ್ಲಿನ ಪ್ರಯೋಗಗಳಿಗೆ ಹೋಲಿಸಿದರೆ ನಾಟಕ ಪ್ರಯೋಗಗಳು ಕಡಿಮೆಯಾಗಿವೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ತಮ್ಮ ನಾಟಕ ಪ್ರಯೋಗಗೊಳ್ಳುತ್ತದೆಯೋ ಇಲ್ಲವೋ ಎನ್ನುವ ಆತಂಕ ಬರಹಗಾರರಿಗೆ ಇರುತ್ತದೆ. ಇಂದು ನಾಟಕದ ಸಾರ್ಥಕತೆ ಇರೋದೂ ಅದು ಪ್ರಯೋಗಕ್ಕೆ ಹೋದಾಗಲೇನೇ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಹೀಗಾಗಿ ಮೊದಲಿನಂತೆ ಬರುತ್ತಿಲ್ಲ. ಆದರೆ ಹೊಸ ರೀತಿ ನಾಟಕಗಳೂ ಬರುತ್ತಿವೆ ಉದಾಹರಣೆಗೆ ಕೆ.ವಿ.ಅಕ್ಷರ ಅವರ ಮದುವೆ ಡಾಟ್ ಕಾಂ, ಪರಿಸರ ಬಗ್ಗೆ, ಇತ್ತೀಚೆಗೆ ಅಲೆಮಾರಿ ಸಮುದಾಯದ ಕುರಿತ, ದಲಿತರ ಕುರಿತ ನಾಟಕಗಳು ಬರ‍್ತಾ ಇವೆ. ಹಿಂದೆ ನಗರ ಕೇಂದ್ರಿತ, ಅಥವಾ ಇತಿಹಾಸ ಸಂಬಂಧಿತ ನಾಟಕಗಳೇನು ಬರ‍್ತಾ ಇದ್ದಂತೆ  ಇಂದು ಅಲಕ್ಷ್ಯಕ್ಕೆ ಒಳಗಾದವರ ಬಗ್ಗೆ ನಾಟಕ ಬರುತ್ತಿವೆ.

ಒಂದು ಪ್ರಭುತ್ವವನ್ನು ಪ್ರತಿಭಟಿಸುವ ಕೆಲಸ ಮಾಡುತ್ತಿದ್ದ ಬೀದಿನಾಟಕಗಳು ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಸೀಮಿತವಾಗಿವೆಯಲ್ಲಾ?
ನಿಜ. ಬೀದಿನಾಟಕದ ಇತಿಹಾಸವೇ ಅದೊಂದು ಪ್ರತಿಭಟನಾ ರಂಗ ರೂಪವಾಗಿದ್ದದ್ದು. ಕಾರ್ಮಿಕರಲ್ಲಿ, ರೈತರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳು ಬಂದವು. ಸಮುದಾಯದಂತಹ ತಂಡ ಬೀದಿ ನಾಟಕವನ್ನೇ ಪ್ರಧಾನವಾಗಿಟ್ಟುಕೊಂಡು ಜಾಥಾ ನಡೆಸಿತ್ತು. ನಂತರ ಎ.ಎಸ್ ಮೂರ್ತಿ,ವಿಜಯಾ ಮುಂತಾದವರು ಚಿತ್ರಾ ತಂಡದ ಮೂಲಕ ಆಗಿನ ರಾಜಕೀಯ ಸಮಸ್ಯೆಗಳ ವಿರುದ್ಧ ಜನ ಜಾಗೃತಿಗೆ ಪ್ರಯತ್ನಿಸಿದ್ದು ನಿಜ. ಆದರೆ ಬೀದಿ ನಾಟಕದಂತಹ ಮಾಧ್ಯಮ ತುಂಬಾ ದುರ್ಬಲ ಸಂರಚನೆ ಹೊಂದಿದ್ದು ಅದನ್ನು ಪ್ರಗತಿಪರರೂ ಬಳಸಿಕೊಳ್ಳಬಹುದು, ಪ್ರಗತಿ ವಿರೋಧಿಗಳೂ ಬೆಳೆಸಿಕೊಳ್ಳಬಹುದು. ಈಗ ಆಗಿರೋದು ಇದೇನೇ. ಇಂದು ಅದೊಂದು ಅಣಕು ಪ್ರದರ್ಶನವಾಗಿ ಮಾತ್ರ ಬಳಕೆಯಾಗಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈಗ ಅದನ್ನು ಮತ್ತೆ ರಿವೈವ್ ಮಾಡೆಉವುದು ಕಷ್ಟ.  ಅದಾಗಬೇಕೆಂದರೆ ಸಾಮಾಜಿಕ ಚಳುವಳಿಗಳು ಜೋರಾಗಿ ಬರಬೇಕು.

ಕನ್ನಡದ ಭಾಷಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀರಿ. ಜಾಗತೀಕರಣದ ಈ ಸಂದರ್ಭದಲ್ಲಿ ಒಂದು ರಾಜ್ಯ ಭಾಷೆಯಾಗಿ ಕನ್ನಡದ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಗುರುತಿಸುತ್ತೀರಿ?
ಜಾಗತೀಕರಣ ಎನ್ನುವುದು ದೇಸೀ ಭಾಷೆಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಅದು ದೇಶಗಳ ಗಡಿಗಳನ್ನು ಒಡೆದು ಎಲ್ಲಾ ಕಡೆ ಆರ್ಥಿಕ ಪ್ರಾಬಲ್ಯ ಸ್ಥಾಪಿಸುವ ವ್ಯವಸ್ಥೆ. ದೇಸೀ ಭಾಷೆಗಳು ನಿರ್ದಿಷ್ಟ ಚೌಕಟ್ಟಿನೊಳಗಡೆಯಲ್ಲೇ ತಮ್ಮ ಸಾಮರ್ಥ್ಯ, ಸಾರ್ಥಕ್ಯ ಕಂಡುಕೊಳ್ಳಬೇಕಿರುತ್ತದೆ. ಏನಾಗ್ತಿದೆ ಎಂದರೆ ಜಾಗತೀಕರಣದ ಭಾಷೆಯಾಗಿ ಇಂಗ್ಲಿಷ್ ಮತ್ತು ತಂತ್ರಜ್ಞಾನ ಎರಡೂ ಒಟ್ಟೊಟ್ಟಿಗೇ ನಮ್ಮ ಮೇಲೆ ದಾಳಿ ಮಾಡುತ್ತಿವೆ. ಸಹಜವಾಗಿಯೇ ನಮ್ಮ ಯುವ ಪೀಳಿಗೆ ಇಂಗ್ಲಿಷ್ ಭಾಷೆ ಕಡೆ ಮತ್ತು ತಂತ್ರಜ್ಞಾನದ ಕಡೆ ಮನಸ್ಸು ಮಾಡುತ್ತಿವೆ. ನಮ್ಮ ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸದಿರುವುದರಿಂದಾಗಿಯೇ ಇಂಗ್ಲಿಷನ್ನು ಅವರು ಬಳಸ ಬೇಕಾಗಿದೆ. ತಂತ್ರಜ್ಞಾನದಲ್ಲಿ ಇಂಗ್ಲಿಷ್ ಬಳಸ ಬೇಕೆಂದ ಕೂಡಲೇ ಅದು ನಮ್ಮ ಶಿಕ್ಷಣದ ಮೇಲೆ ಬೀಳುತ್ತದೆ. ಇಂಗ್ಲಿಷ್ ಮಾಧ್ಯಮದ ಮೂಲಕವೇ ಮಕ್ಕಳು ಕಲಿಯಬೇಕು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಬೇಕು ಎಂಬೆಲ್ಲಾ ಬೇಡಿಕೆ ಶುರುವಾಗುತ್ತದೆ. ಖಾಸಗಿ ಶಾಲೆಗಳು ಹೆಚ್ಚುತ್ತವೆ. ಇದೆಲ್ಲಾ ಬೆಳವಣಿಗೆ ನಮ್ಮಲ್ಲಿ ಈಗ ಆಗಿದೆ. ಯಾವುದೇ ದೇಸೀ ಭಾಷೆಯನ್ನು ಮಾತನಾಡುವ ಸಮುದಾಯ ತನಗೆ ಸಿಗುವ ಅವಕಾಶಗಳಲ್ಲಿ ತನ್ನ ಭಾಷೆಯನ್ನು ಬಳಸಿಯೇ ತೀರುತ್ತೇನೆ ಎಂದು ನಿರ್ಧರಿಸಬೇಕು. ಅದು ಸಾರ್ವಜನಿಕ ಸ್ಥಳ ಇರಬಹುದು, ಖಾಸಗಿ ಸ್ಥಳ ಇರಬಹುದು, ಅಥವಾ ನಾವು ಕೆಲಸ ಮಾಡುವ ಕಡೆ ಇರಬಹುದು ನಾನು ಕನ್ನಡವನ್ನೇ ಬಳಸುತ್ತೇ ಎನ್ನುವ ದೃಢ ಮನಸ್ಸು ಮಾಡಿದರೆ ಆ ದೇಸೀ ಭಾಷೆಗೆ ಆತಂಕ ಇರಲ್ಲ. ಉದಾಹರಣೆಗೆ ನನಗೆ ಸಿಕ್ಕುವ ಎಲ್ಲ ಬಳಕೆಯ ವಲಯಗಳಲ್ಲಿ ಬಳಸದೇ ಹೋದರೆ ಆ ವಲಯದಲ್ಲಿ ಬಳಕೆಯಾಗುವ ಕನ್ನಡ ಪದಗಳನ್ನು ನಾವು ನಿಷ್ಕ್ರಿಯಗೊಳಿಸುತ್ತಾ ಹೋಗ್ತೇವೆ. ಹೊಸದಾಗಿ ಸೃಷ್ಟಿ ಮಾಡಬಹುದಾದ ಕನ್ನಡ ಪದಗಳನ್ನು ನಾವು ಸೃಷ್ಟಿ ಮಾಡುವುದಿಲ್ಲ. ಹಾಗೆ ಸೃಷ್ಟಿ ಮಾಡಬೇಕಿದ್ದ ಜಾಗದಲ್ಲಿ ಅನಾಯಾಸವಾಗಿ ಇಂಗ್ಲಿಷ್ ಪದ ಎತ್ತಿ ಹಾಕಿಕೊಳ್ತೀವೆ. ಅದರಿಂದಾಗಿ ಕನ್ನಡ ಪದಕೋಶ ಕುಗ್ಗುತ್ತಾ ಹೋಗುತ್ತದೆ. ಅದು ಕನ್ನಡ ಭಾಷೆಗೆ ಬಹಳ ದೊಡ್ಡ ಹೊಡೆತವಾಗುತ್ತದೆ. ಅದಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಕನ್ನಡವ್ನನು ಬಳಸುವವರು ಬಹಳ ನಿಕೃಷ್ಟರು. ಇಂಗ್ಲಿಷ್ ಗೊತ್ತಿಲ್ಲದೇ ಇರೋರು ನಿಕೃಷ್ಟರು ಎಂಬಂತಹ ಸಾಮಾಜಿಕ ಭೇದ ಸೃಷ್ಟಿಯಾಗುತ್ತದೆ. ಅದೂ ಸಹ ಆಗಬಾರದು. ಇಂದು ನಾವು ಇಂಗ್ಲಿಷಲ್ಲು ಕಲಿಯಬೇಕು. ಕನ್ನಡದಲ್ಲೂ ಕಲಿಯಬೇಕು. ಆದರೆ ಕರ್ನಾಟಕದಲ್ಲಿ ಭಾಷೆಯ ಬಳಕೆಯ ವಲಯಗಳು ಮಾತ್ರ ಕನ್ನಡದಲ್ಲೇ ಆಗಬೇಕು. ಇದಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರವೂ ಮುಖ್ಯ. ಕನ್ನಡದವರಿಗೆ ಹುದ್ದೆಗಳು ಸೃಷ್ಟಿಯಾಗಬೇಕು.

ರಾಜ್ಯದಲ್ಲಿ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಅಗತ್ಯವಿರುವ ನಿಲುವು,ಕ್ರಮಗಳೇನಾಗಿರಬೇಕು?
ನಮ್ಮ ಸರ್ಕಾರದ ನಿಲುವು ಬಹಳ ಪ್ರಜಾಸತ್ತಾತ್ಮಕವಾಗಿವೆ. ಏಕೆಂದರೆ ಕರ್ನಾಟಕದೊಳಗೇ ಇರುವ ನಾವು ಹೇಗೆ ಇಂಗ್ಲಿಷ್ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದೆ ಎಂದು ಆತಂಕ ಪಡುತ್ತೇವೋ ಹಾಗೇ ತುಳು, ಕೊಡವ, ಬ್ಯಾರಿ, ಕೊಂಕಣಿ ಮುಂತಾದ ಭಾಷಿಕ ಸಮುದಾಯಗಳಿಗೆ ಕನ್ನಡ ನಮ್ಮ ಮೇಲೆ ಸವಾರಿ ಮಾಡುತ್ತೆ ಎನ್ನುವ ಆತಂಕ ಇರುತ್ತದೆ. ಈ ಆತಂಕವನ್ನು ಹೋಗಲಾಡಿಸುವ ಜವಾಬ್ದಾರಿ ನಮಗಿರುತ್ತದೆ. ನಾವು ದೊಡ್ಡಣ್ಣನಾಗಿ ಅವರ ಮೇಲೆ ದಬ್ಬಾಳಿಕೆ ನಡೆಸಬಾರದು. ಬದಲು ಪ್ರೀತಿ- ವಾತ್ಸಲ್ಯ ತೋರಬೇಕು. ಆ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಒಂದೊಳ್ಳೆ ಕೆಲಸ ಮಾಡ್ತಾ ಇದೆ. ಆಯಾ ಭಾಷೆಗಳ ಅಕಾಡೆಮಿ ಸ್ಥಾಪಿಸಿ ಆ ಭಾಷೆ ಸಂಸ್ಕೃತಿಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಭೂಮಾಫಿಯಾ, ಅಪರೇಷನ್ ಕಮಲದಂತಹ ಬೆಳವಣಿಗೆಗಳಿಗೆ ನಾಡಿನ ಒಬ್ಬ ಪ್ರಮುಖ ಚಿಂತಕರಾಗಿ ನಿಮ್ಮ ಪ್ರತಿಕ್ರಿಯೆ ಏನು?
Most Disgusting!  ಒಂದೇ ಮಾತಲ್ಲಿ ಹೇಳಬಹುದಾದರೆ ಇದು ಈ ರೀತಿಯ ಬೆಳವಣಿಗೆ ಎಲ್ಲರಿಗೂ ಅಸಹ್ಯ ತರುವ ಮಟ್ಟದಲ್ಲಿ ನಡೆಯುತ್ತಿದೆ. ಈ ರೀತಿಯ ಗಣಿಗಾರಿಕೆಯಿಂದ ಯಾರೋ ಕೆಲವರು ಕೋಟ್ಯಾದಿಪತಿಗಳಾಗಬಹುದು. ಆದರೆ ಮುಂಬರುವ ಜನಾಂಗ ಆ ಪ್ರದೇಶದಲ್ಲಿ ಮಾಡುವಾಗ ಅನುಭವಿಸುವ ಕಷ್ಟಕೋಟಲೆಗಳಿಗೆ ಯಾರು ಜವಾಬ್ದಾರರು?. ಇಂದು ಮನುಷ್ಯ ಮೈಂಡ್‌ಲೆಸ್ ಆಗಿದಾನೆ. ಮುಂದಿನ ಜನಾಂಗದ ಬಗ್ಗೆ ತನ್ನ ಪಾತ್ರ ಏನೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾನೆ. ಈಗಿನ ಸರ್ಕಾರಗಳೇ ವಿವೇಚನೆ ಕಳೆದುಕೊಂಡಿವೆ. ಇನ್ನು ಸಾಮಾನ್ಯ ಜನ ಏನು ಮಾಡುತ್ತಾರೆ? ಪರಿಸರದ ಮೇಲೆ ಬಹಳಷ್ಟು ಹಾನಿಯಾಗುತ್ತಿದೆ. ನಾನೂ ಆ ಪ್ರದೇಶದಿಂದಲೇ ಬಂದಿರೋನು. ಅಲ್ಲಿ ಇಂದು ಏನೂ ಬೆಳೆಯಲಾಗದ ಸ್ಥಿತಿ ಇದೆ. ಇದೆಲ್ಲದರ ಪರಿಣಾಮವೇ ಅನೈತಿಕ ರಾಜಕಾರಣ. ಇಷ್ಟೆಲ್ಲಾ ನಡೆಯುತ್ತೆ ಎಂದರೆ ಅದು ನೈತಿಕ ರಾಜಕಾರಣವಾಗಿರಲು ಸಾಧ್ಯವೇ ಇಲ್ಲ. ಅನೈತಿಕ ರಾಜಕಾರಣದ ಕೂಸುಗಳೇ ಅಪರೇಷನ್ ಕಮಲ ಮತ್ತು ನಂತರದ ರಾಜಕೀಯ ಬೆಳವಣಿಗೆಗಳು. ನಮ್ಮ ಜನ ಇನ್ನೂ ಇದನ್ನು ಪ್ರೋತ್ಸಾಹ ಕೊಡ್ತಿದಾರಲ್ಲಾ ಎನ್ನೋದೇ ನೋವಿನ ಸಂಗತಿ. ಪ್ರಜಾ ಪ್ರಭುತ್ವದಲ್ಲಿ ಅಂತಿಮವಾಗಿ ಪ್ರಜೆಗಳೇ ಅಲ್ಲವೇ. ಆದರೆ ನಮ್ಮ ಜನ ಯಾವಾಗ ರಿಯಲೈಸ್ ಆಗ್ತಾರೆ ಎಂದ್ರೆ ಎಲ್ಲಾ ಹಾಳಾದ ಮೇಲೆ. ಇಡೀ ಊರೆಲ್ಲಾ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕು ಅನ್ನೋ ಗಾದೆ ಇದೆಯಲ್ಲಾ ಆ ರೀತಿ. ಪ್ರಾರಂಭದಲ್ಲಿ ನಮ್ಮ ಅಜ್ಞಾನ, ಅನಕ್ಷರತೆ, ಇಂದು ಹಣದ ವ್ಯಾಮೋಹ, ಎಲ್ಲದರಿಂದ ನಾವು ನಮ್ಮ ಗೋರಿಗಳನ್ನು ತೋಡೊಕೊಳ್ತಾ ಇದೀವಿ. ನನಗನ್ನಿಸುತ್ತೆ. ಇಡೀ ಜಗತ್ತಿನಲ್ಲಿ ಅತ್ಯಂತ ಭ್ರಷ್ಟ ಮತದಾರರಿರುವುದು ನಮ್ಮ ದೇಶದಲ್ಲಿ. ಅದೂ ರಾಜಕಾರಣಿಗಳು ನೀಡುವ ಹಣ,ಹೆಂಡಗಳ ಕ್ಷುಲ್ಲಕ ಆಸೆಗಳಿಗೆ ಬಿದ್ದು  ಇವರು ತಮ್ಮ ಜವಾಬ್ದಾರಿಯನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ.

ಇತ್ತೀಚೆಗೆ ಸರ್ಕಾರ ಸಂಸ್ಕೃತ ವಿಶ್ವವಿದ್ಯಾಲಯ, ಮಹಿಳಾ ವಿಶ್ವ ವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ. ರಾಜ್ಯದಲ್ಲಿ ಇವು ಒಂದೊಂದೂ ಯಾವ ಪಾತ್ರ ವಹಿಸಬಹುದು?
ಮಹಿಳಾ ವಿವಿ ಬಗ್ಗೆ ನಮ್ಮ ವಿರೋಧವಿಲ್ಲ. ಯಾಕಂದ್ರೆ ಕಳೆದ ಒಂದೆರಡು ದಶಕಗಳಲ್ಲಿ ಮಹಿಳಾ ಅಧ್ಯಯನ ಜಾಗತಿಕವಾಗಿಯೂ, ಕರ್ನಾಟಕದಲ್ಲೂ ಬೆಳೆಯುತ್ತಿದೆ. ಜಾನಪದ ವಿವಿ ಕೂಡಾ ನಮ್ಮ ಜನಪದ ಸಂಸ್ಕೃತಿಯನ್ನು ಇನ್ನಷ್ಟು ಸಮಗ್ರವಾಗಿ ಅಧ್ಯಯನ ನಡೆಸಲು ಇಂತಹ ಒಂದು ಸ್ಪೇಸ್ ಬೇಕಿತ್ತು. ಇದು ಸ್ವಾಗತಾರ್ಹ. ಆದರೆ ನನ್ನ ಮತ್ತು ನನ್ನಂಥವರ ವಿರೋಧವಿದ್ದದ್ದು ಸಂಸ್ಕೃತ ವಿವಿ ತೆರೆಯುವುದರ ಬಗ್ಗೆ. ಏಕೆಂದರೆ ಈಗಾಗಲೇ ೧೨ ಸಂಸ್ಕೃತ ವಿವಿಗಳು, ಸುಮಾರು ೨೨ ಸಂಸ್ಕೃತ ಕುರುಕುಲಗಳಿದ್ದಾರೆ. ಅದೆಲ್ಲಾ ಸೇರಿ ಕೇಂದ್ರ ಸರ್ಕಾರ ಸು.೩೨ ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಸಂಸ್ಕೃತದ ಅಧ್ಯಯನ ಪ್ರಾದೇಶಿಕವಾಗಿ ನಿರ್ಧಾರವಾಗುವಂತದ್ದಲ್ಲ. ಹಾಗೂ ನಿಮಗೆ ಅದನ್ನು ಆರಂಭಿಸಲೇಬೇಕೆಂದಿದ್ದರೆ ಪ್ರಾಚ್ಯ ಭಾಷಾ ವಿಶ್ವವಿದ್ಯಾಲಯ ತೆರೆಯಿರಿ ಎಂದು ಬೇಡಿಕೆ ಇಟ್ಟೆವು. ಎಕೆಂದರೆ ಹಿಂದಿನ ಜ್ಞಾನ ಎನ್ನುವುದು ಕೇವಲ ಸಂಸ್ಕೃತದಲ್ಲಿಲ್ಲ. ಅದು ಪ್ರಾಕೃತ ಭಾಷೆಗಳಲ್ಲಿದೆ, ಪೈಶಾಚಿಕ ಭಾಷೆಗಳಲ್ಲಿದೆ, ಬ್ರಾಹ್ಮೀ ಭಾಷೆಯಲ್ಲಿದೆ, ಸಂಸ್ಕೃತದಲ್ಲಿಯೂ ಇದೆ. ಇದೆಲ್ಲವೂ ಸೇರಿದಂತೆ ಅಧ್ಯಯನ ನಡೆಸಲು ಪ್ರಾಚ್ಯಭಾಷಾ ವಿಶ್ವವಿದ್ಯಾಲಯ ತೆತರೆಯಿರಿ ಎಂದೆವು. ಈ ಬಗೆಯ ವಿವಿ ಇಡೀ ದೇಶದಲ್ಲೇ ಇಲ್ಲ. ಆದರೆ ಸರ್ಕಾರಕ್ಕೆ ಅದರದ್ದೇ ಆದಂತಹ ಅಜೆಂಡಾ ಒಂದು ಇತ್ತು ಎಂದು ಕಾಣತ್ತೆ. ಹಾಗಾಗಿ ಅದು ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ.

ನೀವು ನಿಮ್ಮ ವಿಚಾರ, ಕೃತಿಗಳಲ್ಲಿ ಎಡಪಂಥೀಯರಾಗಿ ಗುರುತಿಸಿಕೊಂಡವರು. ಆದರೆ ಬಲಪಂಥೀಯ ಸರ್ಕಾರವೊಂದರ ಆಳ್ವಿಕೆಯ ಅವಧಿಯಲ್ಲಿ ಸರ್ಕಾರಿ ಪೋಷಿತ ರಂಗಾಯಣದ ಸಾರಥ್ಯ ವಹಿಸಿದಿರಿ. ಇದರ ಬಗ್ಗೆ ಗೊಂದಲ ಸಾರ್ವಜನಿಕರಲ್ಲಿದೆ?
ನನಗೂ ಇದೆ... (ನಗು)

I am also confused. How this government has appointed me as the director of Rangayana. This is the question for me also... I dont know who will answer it...     (ನಗು)

photo By Harsha Kugwe
0 komentar

Blog Archive