ಆದಿಕವಿ ಪಂಪ ಪ್ರಶಸ್ತಿ ಅಂತ್ಯ ಕವಿ ಚಂಪಾಗೆ ಏಕಿಲ್ಲ? ಎಂಬ ವಿಶೇಷ ಸುದ್ದಿ ನಿನ್ನೆ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ. ಕನ್ನಡಪ್ರಭದ ಸಹಾಯಕ ಸಂಪಾದಕ ಪಿ.ತ್ಯಾಗರಾಜ್ ಇದನ್ನು ಬರೆದಿದ್ದಾರೆ. ಕನ್ನಡಪ್ರಭ ಇವತ್ತಿನ ಸಂಚಿಕೆಯಲ್ಲಿ ಈ ವರದಿಯ ಕುರಿತು ಕೆಲವು ಪ್ರತಿಕ್ರಿಯೆಗಳನ್ನೂ ಪ್ರಕಟಿಸಲಾಗಿದೆ.

ಇತ್ತೀಚಿಗಷ್ಟೆ ಡಾ.ಎಂ.ಚಿದಾನಂದ ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರು ವಿವಾದಕ್ಕೆ ಗುರಿಯಾಗಿದ್ದರು. ಈ ಸಂಬಂಧ ದೊಡ್ಡ ಹಾಹಾಕಾರವೇ ಉಂಟಾಯಿತು. ಪ್ರಜಾವಾಣಿ ಪತ್ರಿಕೆ ಮೊದಲು ಈ ವಿವಾದದ ಕುರಿತು ಸ್ಪಂದಿಸಿ, ಹಲವು ಗಣ್ಯರನ್ನು ಮಾತನಾಡಿಸಿ ರಾಜ್ಯಪಾಲರ ನಡೆಯ ಕುರಿತು ಬೆಳಕು ಚೆಲ್ಲಿತು. ನಂತರ ಇತರ ಮೀಡಿಯಾಗಳು ಸಹ ಈ ಕುರಿತು ಹೆಚ್ಚು ಪ್ರಚಾರ ನೀಡಿದವು.

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಅನಾರೋಗ್ಯವಿದ್ದರೂ ಕವಿಗೋಷ್ಠಿಗೆ ಬಂದಿದ್ದೇನೆ, ಇದನ್ನು ಹೇಳಲೇಬೇಕು ಎಂದು ಇಲ್ಲಿಗೆ ಬಂದೆ ಎಂದು ಅವರು ವಿಷಯದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದ್ದರು. ಅದಾದ ನಂತರ ಒಂದಷ್ಟು ಪ್ರತಿಭಟನೆಗಳೂ ನಡೆದವು. ಸಾಹಿತ್ಯ ಸಮ್ಮೇಳನದ ಸಮಾರೋಪದ ಹೊತ್ತಿಗೆ ಒಂದಷ್ಟು ಜನ  ಭಿತ್ತಿಪತ್ರಗಳನ್ನು ಹಿಡಿದು ನಿಂತು ಸಮ್ಮೇಳನದಲ್ಲಿ ರಾಜ್ಯಪಾಲರ ತೀರ್ಮಾನದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರವಾಗಬೇಕು ಎಂದು ಪ್ರತಿಭಟಿಸಿದರು. ಸಮ್ಮೇಳನದ ವೇದಿಕೆಯಲ್ಲಿ ಈ ಕುರಿತು ನಿರ್ಣಯವೂ ಅಂಗೀಕಾರವಾಯಿತು.

ಈಗ ಚಂಪಾ ಸರದಿ. ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರ ಕ್ರಮ ಇಡೀ ರಾಜ್ಯಕ್ಕಾದ ಅವಮಾನವಾದರೆ ಚಂಪಾ ಅವರಿಗೆ ಪಂಪ ಪ್ರಶಸ್ತಿ ಕೊಡಲು ಒಪ್ಪದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕ್ರಮ ರಾಜ್ಯಕ್ಕೆ ಮಾಡಿದ ಅಪಮಾನವಲ್ಲವೆ?

ಈ ಎರಡೂ ಘಟನೆಗಳಿಗೆ ಏನಾದರೂ ವ್ಯತ್ಯಾಸವಿದೆಯೇ? ಹಾಗೆ ನೋಡಿದರೆ, ಗೌರವ ಡಾಕ್ಟರೇಟ್‌ಗಿಂತ ಪಂಪ ಪ್ರಶಸ್ತಿಯೇ ದೊಡ್ಡದು. ಸಿಂಡಿಕೇಟ್ ನಿರ್ಧಾರವನ್ನು ತಳ್ಳಿಹಾಕುವ ಅಧಿಕಾರ ರಾಜ್ಯಪಾಲರಿಗಿರುತ್ತದೆ. ಆದರೆ ಗಣ್ಯರ ಸಮಿತಿ ಪಂಪ ಪ್ರಶಸ್ತಿಗೆ ಒಬ್ಬ ಹಿರಿಯ ಸಾಹಿತಿಯನ್ನು ಆಯ್ಕೆ ಮಾಡಿದ ನಂತರ ಅದನ್ನು ತಿರಸ್ಕರಿಸುವ ನೈತಿಕ ಅಧಿಕಾರ ಒಬ್ಬ ಮುಖ್ಯಮಂತ್ರಿಗೆ ಇರುವುದಿಲ್ಲ.

ಚಿದಾನಂದಮೂರ್ತಿಗಳ ಚಿಂತನೆಗಳ ಬಗ್ಗೆ ತೀವ್ರಸ್ವರೂಪದ ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಸಹ, ಅವರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಹಿನ್ನೆಲೆಯಲ್ಲಿ  ಡಾಕ್ಟರೇಟ್  ತಡೆಹಿಡಿದದ್ದು ತಪ್ಪು ಎಂದರು. ಇದೇ ಮಾನದಂಡವಿಟ್ಟುಕೊಂಡು ಚಂಪಾ ಕುರಿತು ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಮುಖ್ಯಮಂತ್ರಿಗಳ ನಿಲುವನ್ನು ಖಂಡಿಸಬೇಕಿತ್ತಲ್ಲವೇ? ಅಷ್ಟಕ್ಕೂ ಕನ್ನಡ ಸಾಹಿತ್ಯಕ್ಕೆ, ಚಳವಳಿಗೆ ಚಂಪಾ ಅವರ ಕೊಡುಗೆಯೇನು ಕಡಿಮೆಯೇ?

ಚಿದಾನಂದ ಮೂರ್ತಿಗಳ ವಿಷಯದಲ್ಲಿ ಎದ್ದ ವಿವಾದ, ಹಾಹಾಕಾರ ಈಗೇಕೆ ಆಗುತ್ತಿಲ್ಲ? ಯಾಕೆ ಡಾ.ಯು.ಆರ್.ಅನಂತಮೂರ್ತಿ ಮೌನವಾಗಿದ್ದಾರೆ? ಯಾಕೆ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಭಿತ್ತಿ ಪತ್ರ ಹಿಡಿದು ತಂದವರು ಎಲ್ಲಿ ಹೋದರು? ಮೈಸೂರು ಚೌಕದಲ್ಲಿ ಪ್ರತಿಭಟನೆ ನಡೆಸಿದವರೇಕೆ ಬಾಯಿಬಿಡುತ್ತಿಲ್ಲ?

ಬೇರೆಯವರ ವಿಷಯ ಹಾಗಿರಲಿ, ಕನ್ನಡಪ್ರಭ ಹೊರತುಪಡಿಸಿ ಉಳಿದ ಮೀಡಿಯಾಗಳು ಯಾಕೆ ಸುಮ್ಮನಿವೆ? ಇದು ಕನ್ನಡಪ್ರಭ ಹೊರಗೆ ತೆಗೆದ ಸುದ್ದಿ ಎಂಬ ಕಾರಣಕ್ಕೆ ಈ ಮೌನವೇ? ಯಾರು ಬೆಳಕಿಗೆ ತಂದರೇನು ಸುದ್ದಿ ಸುದ್ದಿಯೇ ಅಲ್ಲವೇ? ಇದರಲ್ಲಿ ಎಂಥ ಇಗೋಯಿಸಂ?

ಒಂದು ವೇಳೆ ಇದೇ ಕಾರಣಕ್ಕೆ ಬೇರೆ ಮಾಧ್ಯಮಗಳು ಪಂಪ ಪ್ರಶಸ್ತಿ ಕುರಿತ ವಿವಾದವನ್ನು ನಿರ್ಲಕ್ಷಿಸುತ್ತಿದ್ದರೆ, ಈ ಹುಸಿಪ್ರತಿಷ್ಠೆಯನ್ನು ಈ ಮೀಡಿಯಾಗಳು ಬಿಡುವುದು ಯಾವಾಗ?
0 komentar

Blog Archive