ಇವನೇ ನಮ್ಮ ಪ್ರಭಾಕರ. ಪೂರ್ತಿ ಹೆಸರು ಪ್ರಭಾಕರ ಹರಿಜನ. ಹಾನಗಲ್ನ ಕಲ್ಲಹಕ್ಕಲದ ಹರಿಜನ ಕೇರಿಯ ಹನುಮಂತಪ್ಪ ಹರಿಜನ ಅವರ ಮೊದಲನೇ ಪುತ್ರ ಈತ. ಹನುಮಂತಪ್ಪ ಈಗ ಇಲ್ಲ, ತೀರಿದ್ದಾರೆ. ತಾಯಿ ಶಾಂತವ್ವ ಮುನಿಸಿಪಾಲಿಟಿ ಗಟಾರ ಬಳಿದು ಈತನನ್ನೂ, ಇನ್ನೆರಡು ಮಕ್ಕಳನ್ನೂ ಮತ್ತು ತನ್ನ ತಾಯಿಯನ್ನೂ ಸಾಕುತ್ತಾಳೆ. ಪ್ರಭಾಕರನ ಕುರಿತಾದ ಒಂದು ಕಿರುಚಿತ್ರ ನೋಡಿ ನಾವೆಲ್ಲರೂ ಆಘಾತಗೊಂಡಿದ್ದೆವು. ನೀವೆಲ್ಲರೂ ಕಾಳಜಿ ತೋರಿದಿರಿ. ಅವನನ್ನು ನೋಡಬೇಕೆಂದು ಹಾನಗಲ್ಗೆ ಹೋಗಿ, ಆತನ ಕುಟುಂಬದೊಂದಿಗೆ ಇದ್ದು ಬಂದಿದ್ದೇವೆ.
ಯಾರು ಈ ಹುಡುಗ? ಇವರ ಕುಟುಂಬದ ಕಥೆ ಏನು? ತನ್ನ ತಾಯಿಯ ಸಾಲ ತೀರಿಸಲೆಂದು ಹೊಟೆಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಿರುವ ಈತನನ್ನು ಮತ್ತೆ ಓದಿಗೆ ಹಚ್ಚುವುದು ಹೇಗೆ? ಈತನ ಜಾತಿ ಸರ್ಟಿಫಿಕೇಟ್ನ ಕಥೆ ಏನು? ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ನಾವು ಸಣ್ಣದಾಗಿ ಯೋಜಿಸಿರುವುದಾದರೂ ಏನು? ಈ ಎಲ್ಲವನ್ನೂ ನಿಮ್ಮ ಜತೆ ಹೇಳಿಕೊಳ್ಳಬೇಕು. ಹಾಗೆಯೇ ಈತನಿಗೆ ನಿಮ್ಮ ಸಹಾಯವೂ ಬೇಕು.
ಅಂದಹಾಗೆ ಈತನ ಬಳಿ ಈಗಿರುವುದು ಅವನದೇ ಆದ ಹೊಚ್ಚ ಹೊಸ ಸೈಕಲ್. ಅದು ಆ ಹೊಳಪುಗಣ್ಣಿನ ಹುಡುಗನಿಗೆ ನಮ್ಮೆಲ್ಲರ ಪ್ರೀತಿಯ ಕೊಡುಗೆ. ಆ ಕಿರುಚಿತ್ರವನ್ನು ನೋಡಿದಾಗಿನಿಂದ ಸೈಕಲ್ ಎಂಬ ವಸ್ತುವೇ ವ್ಯವಸ್ಥೆಯ ಕ್ರೌರ್ಯದ, ನಮ್ಮ ಅಸಹಾಯಕತೆಯ ಸಂಕೇತದಂತೆ ಕಾಡುತ್ತಿತ್ತು. ಪ್ರಭಾಕರನ ಮೊಗದಲ್ಲಿ ಈಗ ಸಣ್ಣ ಗೆಲುವು, ನಮಗೆ ಪುಟ್ಟ ಖುಷಿ.
ಅವನ ಕುರಿತು, ಅವನ ತಾಯಿಯ ಕುರಿತು, ತಮ್ಮ-ತಂಗಿಯರ ಕುರಿತು ತುಂಬಾ ತುಂಬಾ ಹೇಳುವುದಿದೆ. ರಿಸರ್ವೇಷನ್ ಇಲ್ಲದೆ ರೈಲು ಹಿಡಿಯಬಾರದು. ಹಿಡಿದರೂ ನಿಲ್ಲಲೂ ಜಾಗವಿಲ್ಲದ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಬಾರದು. ಇದನ್ನು ಉಲ್ಲಂಘಿಸಿದರ ಪರಿಣಾಮ ಕೊಂಚ ಆಯಾಸ. ಸ್ವಲ್ಪ ಟೈಮ್ ಕೊಡಿ, ಪ್ಲೀಸ್.


发表评论